ಕಲಬುರಗಿ: ನಾಲ್ಕು ರಾಜ್ಯಗಳಲ್ಲಿ 260ಕ್ಕೂ ಹೆಚ್ಚು ಮನೆಗಳ್ಳತನ ಮಾಡಿ, ಕದ್ದ ಹಣದಲ್ಲಿ ಪಾಪ ಪರಿಹಾರಕ್ಕಾಗಿ ಸಮಾಜ ಸೇವೆ ಮಾಡುವುದರ ಜೊತೆಗೆ ಐಷಾರಾಮಿ ಜೀವನ ಸಾಗಿಸುತ್ತಿದ್ದ ಅಂತರರಾಜ್ಯ ಕಳ್ಳನನ್ನು ಅಶೋಕ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
‘ಮನೆಗಳ್ಳತನ ಮಾಡುತ್ತಿದ್ದ ತೆಲಂಗಾಣದ ಸಿಕಂದರಬಾದ್ ನಿವಾಸಿ ಶಿವಪ್ರಸಾದ ಅಲಿಯಾಸ್ ಮಂತ್ರಿ ಶಂಕರ (56) ಎಂಬಾತನನ್ನು ಬಂಧಿಸಿ, ₹ 30 ಲಕ್ಷ ಮೌಲ್ಯದ 412 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ 260ಕ್ಕೂ ಹೆಚ್ಚು ಮನೆಗಳ್ಳತನ ಮಾಡಿದ್ದಾನೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಿವಪ್ರಸಾದ 14ನೇ ವಯಸ್ಸಿನಿಂದಲೇ ಕಳ್ಳತನ ಶುರು ಮಾಡಿದ್ದ. ಕಳ್ಳತನದ ಪಾಪ ಪರಿಹಾರಕ್ಕಾಗಿ ದೇವಸ್ಥಾನ, ಜಾತ್ರೆಯಲ್ಲಿ ಅನ್ನ ಸಂತರ್ಪಣೆ, ಬಡ ರೋಗಿಗಳಿಗೆ ಧನಸಹಾಯದಂತಹ ಸಮಾಜ ಸೇವೆಯನ್ನೂ ಮಾಡುತ್ತಿದ್ದ. ಸಹಾಯ ಪಡೆದವರು ಈತನಿಗೆ ಮಂತ್ರಿ ಶಂಕರ ಎಂದು ಕರೆಯುತ್ತಿದ್ದರು. ಈತ ಐವರನ್ನು ಮದುವೆ ಆಗಿದ್ದು, ಮಹಾನಗರಗಳ ಡ್ಯಾನ್ಸ್ ಕ್ಲಬ್ಗಳಲ್ಲಿ ಹಣ ಖರ್ಚು ಮಾಡುತ್ತಿದ್ದ’ ಎಂದರು.
‘ಕಲಬುರಗಿಯ ಭಾಗ್ಯವಂತಿ ನಗರದ ಮನೆಯಲ್ಲಿ ಕದ್ದು ಕಾಂಪೌಂಡ್ ಹಾರಿ ಗಾಯಗೊಂಡಿದ್ದ. ಇದರ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಇದಕ್ಕೂ ಮುನ್ನ 210 ಕಳ್ಳತನ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದು, ನಾಲ್ಕು ವರ್ಷ ಜೈಲಿಗೂ ಹೋಗಿದ್ದ. ಆದರೂ ಕಳ್ಳತನ ಕೃತ್ಯ ಬಿಟ್ಟಿರಲಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.