ADVERTISEMENT

ಕಲಬುರ್ಗಿಯಲ್ಲಿ ಹೂಡಿಕೆದಾರರ ಸಮಾವೇಶ: ಶೆಟ್ಟರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 14:57 IST
Last Updated 31 ಆಗಸ್ಟ್ 2020, 14:57 IST
ಜಗದೀಶ ಶೆಟ್ಟರ
ಜಗದೀಶ ಶೆಟ್ಟರ   

ಕಲಬುರ್ಗಿ: ‘ರಸ್ತೆ, ರೈಲು, ವಾಯು ಸಂಪರ್ಕ ಸೇರಿದಂತೆ ಉತ್ತಮ ಮೂಲಸೌಕರ್ಯ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆಗೆ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಮುಂದಿನ ದಿನದಲ್ಲಿ ಕಲಬುರ್ಗಿಯಲ್ಲಿ ಹೂಡಿಕೆದಾರರ ಸಮಾವೇಶ ಆಯೋಜನೆ ಮತ್ತು ರೋಡ್‌ ಶೋ ಮಾಡಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಘೋಷಿಸಿದರು.

ನಗರದಲ್ಲಿ ಸೋಮವಾರ ಉದ್ಯಮಿಗಳೊಂದಿಗೆ ಸಂವಾದದಲ್ಲಿ ಈ ಭರವಸೆ ನೀಡಿದ ಅವರು, ‘ಸ್ಥಳೀಯ ಉದ್ಯಮಿಗಳ ಜೊತೆ ಇತರೆ ಭಾಗದ ಉದ್ಯಮಿಗಳನ್ನು ಸರ್ಕಾರ ಒದಗಿಸುತ್ತಿರುವ ಮೂಲಸೌಕರ್ಯ ಸೇವೆಗಳ ಬಗ್ಗೆ ಮನವೊಲಿಸಲು ಇಂತಹ ಸಮಾವೇಶ ಮತ್ತು ರೋಡ್ ಶೋ ಸಹಕಾರಿಯಾಗಲಿದೆ. ಹುಬ್ಬಳ್ಳಿ ಸಮಾವೇಶದ ಫಲವಾಗಿಯೇ ಯಾದಗಿರಿ ಕಡೇಚೂರನಲ್ಲಿ ಸುಮಾರು 15 ಫಾರ್ಮ್‌ ಉದ್ಯಮಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ’ ಎಂದರು.

‌‘ರಾಜ್ಯದ ಇತರೆ ಎಸ್ಕಾಂ ಸಂಸ್ಥೆಗಳು ವಿದ್ಯುತ್ ಕಂಬಗಳನ್ನು ಸ್ಥಳೀಯ ಉದ್ಯಮಿಗಳಿಂದ ಮಾತ್ರ ಖರೀದಿಸುತ್ತಿವೆ. ಆದರೆ, ಇಲ್ಲಿನ ಜೆಸ್ಕಾಂ ಸಂಸ್ಥೆ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಗುತ್ತೆಗಾದಾರರಿಂದ ವಿದ್ಯುತ್ ಕಂಬ ಖರೀದಿಸುತ್ತಿದೆ. ಇದರಿಂದ ಸ್ಥಳೀಯ ಉದ್ಯಮಿದಾರರಾದ ನಮಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು’ ಎಂದು ಉದ್ಯಮಿಯೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ, ಈ ಸಂಬಂಧ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ADVERTISEMENT

ಹೊಸದಾಗಿ ಘೋಸಿರುವ ಕೈಗಾರಿಕಾ ನೀತಿ ದೇಶದಲ್ಲಿಯೇ ಉತ್ತಮ ನೀತಿಯಾಗಿದೆ. ಆದರೆ, ಇದನ್ನು ಮುಂದಿನ 5 ವರ್ಷದ ವರೆಗೆ ಚಾಲ್ತಿಯಲ್ಲಿಟ್ಟು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು ಎಂದುಉದ್ಯಮಿ ಸುರೇಶ ಜಿ. ನಂದ್ಯಾಳ ಕೋರಿದರು.

ಮಹಿಳಾ ಉದ್ಯಮಿ ವಿಜಯಲಕ್ಷ್ಮಿ ಮಾತನಾಡಿ, ನಂದೂರ– ಕೆಸರಟಗಿ ಕೈಗಾರಿಕಾ ಪ್ರದೇಶದ ಮಹಿಳಾ ಪಾರ್ಕ್‍ನಲ್ಲಿ ಉದ್ಯಮ ಸ್ಥಾಪನೆಗೆ ಮಹಿಳಾ ಉದ್ಯಮಿಗಳು ಮುಂದೆ ಬಂದಿದ್ದಾರೆ. ಸೂಕ್ತ ಮೂಲಸೌಕರ್ಯ ಮತ್ತು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಸಂವಾದದಲ್ಲಿ ಅನೇಕ ಯುವ ಮತ್ತು ಹಿರಿಯ ಉದ್ಯಮಿಗಳು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.