ಕಲಬುರಗಿ: ಹೆಚ್ಚಿನ ಹಣ ಗಳಿಕೆಯ ಆಮಿಷವೊಡ್ಡಿ ‘ಸ್ವಯಂಚಾಲಿತ ಟ್ರೇಡಿಂಗ್’ನಲ್ಲಿ ಹೂಡಿಕೆಗೆ ಪ್ರಚೋದಿಸಿದ ಸೈಬರ್ ವಂಚಕರು ನಗರದ ಅಕ್ಕಮಹಾದೇವಿ ಕಾಲೊನಿಯ ವೃದ್ಧರೊಬ್ಬರಿಗೆ ₹2.24 ಕೋಟಿ ವಂಚಿಸಿದ್ದಾರೆ.
ಜೆಸ್ಕಾಂ ನಿವೃತ್ತ ನೌಕರರಾಗಿರುವ 63 ವರ್ಷದ ದತ್ತಪ್ಪ ಸುರಪುರ ವಂಚನೆಗೊಳಗಾದವರು.
‘ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ನೋಡುತ್ತಿದ್ದಾಗ 2025ರ ಜೂನ್ 11ರಂದು ‘ಆಟೊ ಟ್ರೇಡಿಂಗ್’ ಜಾಹೀರಾತು ನೋಡಿದೆ. ಅದರ ಮೇಲಿನ ಲಿಂಕ್ ಕ್ಲಿಕ್ಕಿಸಿ ವೈಯಕ್ತಿಕ ಮಾಹಿತಿ ನಮೂದಿಸಿದೆ. ಬಳಿಕ ಅರುಣ ಜೋಶಿ ಎಂಬಾತ ‘ಕ್ವಾಂಟಾ ಪಲ್ಸ್’ನಲ್ಲಿ ಹೂಡಿಕೆಗೆ ಉತ್ತೇಜಿಸಿದ. ಆರಂಭದಲ್ಲಿ ₹12 ಸಾವಿರ ಹೂಡಿಕೆ ಮಾಡಿದೆ. ನಿತ್ಯ ಆಟೊ ಟ್ರೇಡಿಂಗ್ ಲಾಭವಾಗಿ ₹500, ₹800 ಖಾತೆಗೆ ಬರುತ್ತಿತ್ತು’ ಎಂದು ದೂರಿನಲ್ಲಿ ದತ್ತಪ್ಪ ತಿಳಿಸಿದ್ದಾರೆ.
‘ಬಳಿಕ ₹2 ಲಕ್ಷ ಹೂಡಿಕೆ ಮಾಡುವಂತೆ ಅರುಣ ಜೋಶಿ ತಿಳಿಸಿದ. ನಾನು ₹2 ಲಕ್ಷ ಹೂಡಿಕೆ ಮಾಡಿದೆ. ಆಗ ಹೂಡಿಕೆಯ ಲಾಭದ ಹಣವಾಗಿ ನನ್ನ ಖಾತೆಯಲ್ಲಿ ₹4 ಕೋಟಿ ತೋರಿಸುತ್ತಿತ್ತು. ಬಳಿಕ ₹1.30 ಕೋಟಿ ವಿಥ್ಡ್ರಾ ಮಾಡಿಕೊಳ್ಳಲು ಹೇಳಿದರು. ಆದರೆ, ಅದನ್ನು ವಿಥ್ಡ್ರಾ ಮಾಡಲು ತೆರಿಗೆ ಮತ್ತಿತರ ಶುಲ್ಕವಾಗಿ ₹80 ಲಕ್ಷ ಪಾವತಿಸುವಂತೆ ನನ್ನ ಖಾತೆಗೆ ಇ–ಮೇಲ್ ಬಂತು. ಬಳಿಕ ಹಂತ–ಹಂತವಾಗಿ ₹80 ಲಕ್ಷ ವರ್ಗಾಯಿಸಿಕೊಂಡರು. ಭಾರತೀಯ ಹಣವಾಗಿ ಪರಿವರ್ತಿಸಿ ನನ್ನ ಖಾತೆಗೆ ಹಾಕಿದ್ದಾಗಿ ಸಂದೇಶ ಕಳುಹಿಸಿದರು. ಆದರೆ, ಹಣ ಬರಲಿಲ್ಲ. ಬಳಿಕ ನನ್ನ ₹1.30 ಕೋಟಿಯೊಂದಿಗೆ ವಿಮೆ ಮೊತ್ತ ಸೇರಿ ₹2.3 ಕೋಟಿಯಾಗಿದೆ ಎಂದರು. ಇನ್ನುಳಿದ ಮೊತ್ತಕ್ಕೆ ತೆರಿಗೆ, ಶುಲ್ಕವಾಗಿ ಮತ್ತೆ ಒಮ್ಮೆ ₹32 ಲಕ್ಷ, ಮತ್ತೊಮ್ಮೆ ₹50 ಲಕ್ಷ ಕಟ್ಟಿಸಿಕೊಂಡರು. ಹೀಗೆ ಒಂದಿಲ್ಲೊಂದು ಕಾರಣ ಹೇಳುತ್ತ ಹಂತ–ಹಂತವಾಗಿ ₹2.24 ಕೋಟಿ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ಕಲಬುರಗಿ ಸೆನ್ ಠಾಣೆಯಲ್ಲಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.