ಚಿಂಚೋಳಿ: ತಾಲ್ಲೂಕಿನ ಐನಾಪುರ ಗ್ರಾಮದ ನಂದಿಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ತೇರು ಎಳೆದು ಸಂಭ್ರಮಿಸಿದರು.
ಗ್ರಾಮದ ಬೆನಕೆಪಳ್ಳಿ ಮಾರ್ಗದ ರಸ್ತೆ ಬದಿಯ ಹೊಲದಲ್ಲಿ ನೆರೆದ ಸಹಸ್ರಾರು ಭಕ್ತರ ಮಧ್ಯೆ ಮಹಿಳೆಯರು ತೇರು ಎಳೆದರು. ಖ್ಯಾತ ಪ್ರವಚನಕಾರ ಮಲ್ಲಯ್ಯ ಶಾಸ್ತ್ರಿ ನೇತೃತ್ವದಲ್ಲಿ ಜ.26ರಿಂದ ಜಾತ್ರೆ ನಡೆಯುತ್ತಿದೆ.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ ತೇರು ಮೈದಾನದಲ್ಲಿ ರಥದ ಎದುರಿಗೆ 1001 ಮಹಿಳೆಯರನ್ನು ಸಾಲಾಗಿ ಕೂರಿಸಿ ತಲೆಗೆ ಮಲ್ಲಿಗೆಯ ದಂಡೆ ಕಟ್ಟಿ ಉಡಿತುಂಬಲಾಯಿತು. ಗ್ರಾ.ಪಂ ಅಧ್ಯಕ್ಷೆ ಮಧು ರಮೇಶ ಪಡಶೆಟ್ಟಿ ಅವರು ರಥಕ್ಕೆ ಪೂಜೆ ಸಲ್ಲಿಸಿದರು. ನಂತರ ಉಡಿತುಂಬಿಕೊಂಡ ಸುಮಂಗಲೆಯರು ತಾವು ಕುಳಿತ ಸ್ಥಳದಲ್ಲೇ ಎದ್ದು ನಿಂತು ತೇರಿಗೆ ಕಟ್ಟಿದ್ದ ಮಿಣಿ ಹಗ್ಗ ಹಿಡಿದು ತೇರು ಎಳೆದರು.
ರಥೋತ್ಸವದಲ್ಲಿ ಶ್ರೀಶೈಲದ ಸಾರಂಗಧರೇಶ್ವರ ಜಗದ್ಗುರುಗಳು, ಶಾಸಕ ಡಾ.ಅವಿನಾಶ ಜಾಧವ, ತಾ.ಪಂ ಸದಸ್ಯ ಪ್ರೇಮಸಿಂಗ್ ಜಾಧವ, ರವಿ ಪಡಶೆಟ್ಟಿ, ದಾಸೋಹ ಅಣ್ಣೆಪ್ಪ ವರನಾಳ್ ಚಿಟ್ಟಗುಪ್ಪ, ಶಿವಕುಮಾರ ಚೌಡಶೆಟ್ಟಿ, ದೀಪಕ ಪಾಟೀಲ, ರಮೇಶ ಪಟಶೆಟ್ಟಿ, ರೇವಪ್ಪ ಉಪ್ಪಿನ್, ಅಶೋಕ ಪಡಶೆಟ್ಟಿ, ಅಪ್ಪಾರಾವ್ ಪಾಟೀಲ, ರವಿ ಪಡಶೆಟ್ಟಿ, ರವಿಕಾಂತ ಮಠಪತಿ, ಸಿದ್ದಪ್ಪ ಗಾರಂಪಳ್ಳಿ, ಡಾ. ವಿಠಲರಾವ್ ಪಾಟೀಲ, ಜನಾರ್ಧನ ವಾಗ್ಜಿ, ಜ್ಞಾನದೇವ ಪಾಟೀಲ, ಕಲ್ಲಪ್ಪ ಮೇತ್ರಿ, ರಮೇಶ ಕರಗಾರ, ನಾಗಪ್ಪ ಮೇತ್ರಿ, ಚಂದ್ರ ಗಾರಂಪಳ್ಳಿ, ಶ್ರೀಶೈಲ್ ಶಾಸ್ತ್ರಿ, ಚಂದ್ರಶೆಟ್ಟಿ ಗಾರಂಪಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.