ಕಲಬುರ್ಗಿ: ಜಮೀನು ಪೋಡಿ ಮಾಡಿ ಕೊಡಲು ₹ 3 ಸಾವಿರ ಲಂಚ ಪಡೆದ ಸೇಡಂ ತಹಶೀಲ್ ಕಚೇರಿಯ ಖಾಸಗಿ ಸರ್ವೆಯರ್ ಟಿ.ಎಚ್.ರಾಜಕುಮಾರಗೆ ಇಲ್ಲಿನ ಜಿಲ್ಲಾ ಪ್ರಧಾನ ಹಾಗು ವಿಶೇಷ ಸೆಷನ್ಸ್ ನ್ಯಾಯಾಧೀಶ ಆರ್.ಜೆ.ಸತೀಶ ಸಿಂಗ್ ಅವರು ಎರಡು ಕಲಂಗಳಡಿ ತಲಾ 3 ವರ್ಷ ಜೈಲು ಹಾಗೂ ತಲಾ ₹ 5 ಸಾವಿದ ದಂಡ ವಿಧಿಸಿದ್ದಾರೆ.
ಸೇಡಂ ತಾಲ್ಲೂಕಿನ ತೊಟ್ನಳ್ಳಿಯ ಚಂದ್ರಕಾಂತ ಮುದಕನಳ್ಳಿ ಹಾಗೂ ಅವರ ತಮ್ಮ ಸೂರ್ಯಕಾಂತ ಮುದಕನಳ್ಳಿ ಇವರ ಹೆಸರಿನಲ್ಲಿ ಕೂಡಿಕೊಂಡಿರುವ ತೊಟ್ನಳ್ಳಿ ಗ್ರಾಮದಲ್ಲಿನ ಜಮೀನು ಪೋಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ರಾಜಕುಮಾರ ಹಣಮಂತಪ್ಪ 2011ರ ನವೆಂಬರ್ 9ರಂದು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ತಮ್ಮರಾಯ ಪಾಟೀಲ ದಾಳಿ ನಡೆಸಿ ಬಂಧಿಸಿದ್ದರು. ನಂತರ ಪೊಲೀಸ್ ಇನ್ಸ್ಪೆಕ್ಟರ್ ಎಚ್.ದೊಡ್ಡಣ್ಣ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ 2015ರ ನವೆಂಬರ್ 16ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ ಸಿಂಗ್ ಅವರು ಕಲಂ 7 ಪಿ.ಸಿ ಆಕ್ಟ್ನಲ್ಲಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ, ಲಂಚ ಪ್ರತಿಬಂಧಕ ಕಾಯ್ದೆ ಅಡಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು, ಲೋಕಾಯುಕ್ತದ ಪರವಾಗಿ ಸರ್ಕಾರಿ ಅಭಿಯೀಜಕ ಎ.ಎಸ್.ಚಾಂದಕವಟೆ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.