ADVERTISEMENT

ಕಲಬುರಗಿ | ‘ರೈತರ ಬೆಳೆ ವಿಮೆಯ ಬಾಕಿ ಹಣ ಪಾವತಿಸಿ’

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:52 IST
Last Updated 27 ಮೇ 2025, 15:52 IST
ಬಾಲರಾಜ್ ಗುತ್ತೇದಾರ್
ಬಾಲರಾಜ್ ಗುತ್ತೇದಾರ್   

ಕಲಬುರಗಿ: ‘ಮುಂಗಾರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಬೆಳೆ ವಿಮೆಯ ಬಾಕಿ ಹಣ ಬಾರದೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಎರಡು ವಾರದೊಳಗೆ ವಿಮೆಯ ಬಾಕಿ ಹಣ ಪಾವತಿ ಮಾಡದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹೋರಾಟ ಮಾಡಲಾಗುವುದು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದರು.

‘ಬೆಳೆ ಕಳೆದುಕೊಂಡಾಗ ಬೆಳೆ ವಿಮೆ ಆಸರೆ ಆಗುತ್ತದೆ ಎಂದು ಕಳೆದು ಎರಡು ವರ್ಷಗಳಿಂದ ಹಲವು ರೈತರು ಬೆಳೆ ವಿಮೆ ಮಾಡಿಸಿದ್ದರು. ಹಾನಿಯಾದ ಬೆಳೆಗೆ ವಿಮಾ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರವು ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮುಂಗಾರು ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರೈತರೂ ಬೀಜ, ಗೊಬ್ಬರ, ಕೃಷಿ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಬೆಳೆ ವಿಮೆಯ ₹ 667 ಕೋಟಿ ಘೋಷಿಸಿ ಎರಡು ತಿಂಗಳು ಕಳೆದರೂ ಹಣ ಬಿಡುಗಡೆ ಮಾಡಿಲ್ಲ. ರೈತರಿಗೆ ಹಣ ಕೊಡಿಸುವಲ್ಲಿ ಕೃಷಿ ಇಲಾಖೆ, ಜಿಲ್ಲಾಡಳಿತ ವಿಫಲವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಜಿಲ್ಲೆಯ 2.38 ಲಕ್ಷ ಹೆಕ್ಟೇರ್​ ಬೆಳೆಗೆ 2.04 ರೈತರು ಬೆಳೆ ವಿಮೆ ಮಾಡಿ ಹಣ ಕಟ್ಟಿದ್ದಾರೆ. ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ₹ 667 ಕೋಟಿಯಲ್ಲಿ ₹ 188 ಕೋಟಿ ಮಾತ್ರವೇ ಬಿಡುಗಡೆ ಮಾಡಿದೆ. ಉಳಿದ ಹಣ ಕೊಡುತ್ತಿಲ್ಲ’ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ, ಪ್ರಮುಖರಾದ ಶಾಮರಾವ್ ಸೂರನ್​, ರಾಮಚಂದ್ರ ಅಟ್ಟೂರ, ದೇವಿಂದ್ರ ಹಸನಾಪುರ, ಮಲ್ಲಿಕಾರ್ಜುನ ಸಂಗಾಣಿ, ರಾಜಾ ಪಟೇಲ​, ಪ್ರವೀಣ ಜಾಧವ್​ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.