ಜೇವರ್ಗಿ: ಮಹಾರಾಷ್ಟ್ರದಿಂದ ಭೀಮಾನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ತಾಲ್ಲೂಕಿನ ಕಟ್ಟಿಸಂಗಾವಿ ಯಿಂದ ನರಿಬೋಳ ಗ್ರಾಮಕ್ಕೆ ತೆರಳುವ ಮಾರ್ಗದ ಸೇತುವೆ ಜಲಾವೃತಗೊಂಡಿದೆ.
ಕಟ್ಟಿಸಂಗಾವಿ–ನರಿಬೋಳ ಸೇತುವೆ ಮುಳುಗಡೆಯಿಂದ ತಾಲ್ಲೂಕಿನ ಮದರಿ, ಯನಗುಂಟಿ, ನರಿಬೋಳ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಭೀಮಾ ನದಿಗೆ ಹೆಚ್ಚಾಗಿ ನೀರು ಹರಿದುಬರುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮಸ್ಥರಿಗೆ ತಾಲ್ಲೂಕಾಡಳಿತ ಸೂಚಿಸಿದೆ.
ನದಿ ದಡದ ಇಟಗಾ, ಭೊಸಗಾ.ಕೆ, ಭೋಸಗಾ.ಬಿ, ಸಿದ್ನಾಳ, ಅಂಕಲಗಾ, ಹಂಚಿನಾಳ, ಕೋನಾಹಿಪ್ಪರಗಿ, ಬಣಮಗಿ, ಕೂಡಿ, ಕೋಬಾಳ, ಹಂದನೂರ, ರಾಸಣಗಿ, ಹರವಾಳ, ನೆಲೋಗಿ, ಮದರಿ, ಯನಗುಂಟಿ, ನರಿಬೋಳ, ಮಲ್ಲಾ.ಬಿ, ಮಲ್ಲಾ.ಕೆ, ಹೋತಿನಮಡು, ಹೊನ್ನಾಳ, ರಾಂಪೂರ, ರಾಜವಾಳ ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗಿ ತೊಗರಿ, ಹತ್ತಿ, ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ನದಿ ತೀರದ ಕೆಲವು ಗ್ರಾಮಗಳ ಮನೆಗಳಲ್ಲಿ ನೀರು ನುಗ್ಗಿ ದಿನಸಿ ಸಾಮಗ್ರಿ, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಕೂಡಲೇ ಸಂತ್ರಸ್ತರ ನೆರವಿಗೆ ತಾಲ್ಲೂಕಾಡಳಿತಕ್ಕೆ ಸ್ಪಂದಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.