ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗರಕಪಳ್ಳಿ ಬ್ರಿಜ್ ಕಂ ಬ್ಯಾರೇಜಿನ ಸೇತುವೆ ಜಲಾವೃತವಾಗಿರುವುದು.
ಚಿಂಚೋಳಿ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಮತ್ತು ಚಂದ್ರಂಪಳ್ಳಿ ನೀರಾವರಿ ಯೋಜನೆಯ ಜಲಾಶಯದಿಂದ ನೀರು ನದಿಗೆ ಬಿಟ್ಟಿರುವುದರಿಂದ ಸರನಾಲಾ ಮತ್ತು ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಚಂದ್ರಂಪಳ್ಳಿ ಜಲಾಶಯದಿಂದ ಎರಡು ಗೇಟು ತೆರೆದು ನದಿಗೆ ನೀರು ಬಿಟ್ಟಿದ್ದರಿಂದ ಮುಲ್ಲಾಮಾರಿಯ ಉಪನದಿಯಾದ ಸರನಾಲಾ ನದಿ ತುಂಬಿ ಹರಿಯುತ್ತಿದೆ. ನಾಗರಾಳ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹವ ಸ್ಥಿತಿ ಏರ್ಪಟ್ಟಿದೆ.
ಚಂದ್ರಂಪಳ್ಳಿ ಜಲಾಶಯದ ನೀರು ಚಿಂಚೋಳಿ ದೇಗಲಮಡಿ ಮಧ್ಯೆ ಮುಲ್ಲಾಮಾರಿ ನದಿ ಸೇರುವುದರಿಂದ ಎರಡೂ ಜಲಾಶಯಗಳ ನೀರು ಮುಲ್ಲಾಮಾರಿ ಉಕ್ಕೇರಲು ಕಾರಣವಾಗಿದೆ.
ಇದರಿಂದ ಚಂದಾಪುರ, ಪೋಲಕಪಳ್ಳಿ- ಅಣವಾರ, ಗರಕಪಳ್ಳಿ- ಭಕ್ತಂಪಳ್ಳಿ , ಬುರುಗಪಳ್ಳಿ- ಇರಗಪಳ್ಳಿ ಬ್ರಿಜ್ ಕಂ ಬ್ಯಾರೇಜು ಮುಳುಗಡೆಯಾಗಿವೆ. ಆದರೆ ಇದರಿಂದ ಜನರ ಓಡಾಟಕ್ಕೆ ತೊಂದರೆಯಾಗಿಲ್ಲ. ಮಳೆ ಮುಂದುವರಿದರೆ ಸಮಸ್ಯೆ ಉಂಟಾಗಲಿದೆ.
ನಾಗರಾಳ ಜಲಾಶಯದ ನೀರಿನಮಟ್ಟ 489.55 ಮೀಟರ್ ಇದೆ. ರಾತ್ರಿ 2500 ಕ್ಯೂಸೆಕ್ ನೀರು ಬಿಟ್ಟರೆ ಈ ನೀರು ಈಗ ಚಿಂಚೋಳಿ ಅಣವಾರ, ಪೋಲಕಪಳ್ಳಿ ದಾಟಿ ಹೋಗುತ್ತಿವೆ. ಹಗಲು 450 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಚಂದ್ರಂಪಳ್ಳಿ ಜಲಾಶಯದ ನೀರಿನ ಮಟ್ಟ 1615 ಅಡಿ ತಲುಪಿತು. ಮಧ್ಯರಾತ್ರಿ 12.30ರಿಂದ ಎರಡು ಗೇಟು ಎತ್ತಿ 2, 405 ಕ್ಯೂಸೆಕ ನೀರು ಬಿಡಲಾಗಿದೆ.ಜಲಾಶಯಕ್ಕೆ 2,404 ಕ್ಯೂಸೆಕ್ ಒಳಹರಿವು ಇದೆ. ಸದ್ಯ ಜಲಾಶಯದ ನೀರಿನ ಮಟ್ಟ 1612.8 ಅಡಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.