ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಲಬುರಗಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ವಿಶೇಷ ತರಬೇತಿ ನೀಡಲಾಯಿತು.
ಒಟ್ಟು ಜಿಲ್ಲೆಯ ಒಂದು ಸಾವಿರ ಪೊಲೀಸರಿಗೆ ತರಬೇತಿ ನೀಡುವ ಉದ್ದೇಶವಿದ್ದು, ಮೊದಲ ದಿನದ ತರಬೇತಿಯಲ್ಲಿ ಆಸ್ಪತ್ರೆಯ ತುರ್ತುಸೇವಾ ಘಟಕ ಮುಖ್ಯಸ್ಥ ಡಾ.ಚೈತನ್ಯ ಕೊಂಡಬಾಲ ಅವರು ಜಿಲ್ಲೆಯ ಸುಮಾರು 95 ಪೊಲೀಸರಿಗೆ ತರಬೇತಿ ನೀಡಿದರು.
ಗಲಭೆ, ಅಗ್ನಿಅವಘಡ, ರಸ್ತೆ ಅಪಘಾತ ಮುಂತಾದ ಸಂದಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸುವಾಗ ಪೊಲೀಸರು ಪ್ರಥಮ ಚಿಕಿತ್ಸೆ ಕೊಡುವ ವಿಧಾನ, ಸ್ಪಂದಿಸುವ ಕ್ರಮ, ಅನುಸರಿಸುವ ನೀತಿ ಕುರಿತು ಸವಿಸ್ತಾರವಾಗಿ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ಕೊಟ್ಟರು.
ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ ಸೇರಿದಂತೆ ಪದಾಧಿಕಾರಿಗಳು ಈ ತರಬೇತಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ತರಬೇತಿ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಆನಂದ ಗಾರಂಪಳ್ಳಿ, ರೆಜಿಸ್ಟ್ರಾರ್ ಶರಣು ಪಾಟೀಲ, ಆಸ್ಪತ್ರೆಯ ಕಾರ್ಯಕ್ರಮದ ಸಂಯೋಜಕಿ ಪ್ರಿಯದರ್ಶಿನಿ ಬೆಂಗಾಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.