ಕಲಬುರಗಿ: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧೆಡೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 27 ಮಂದಿ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ. ಜೂಜಾಡುತ್ತಿದ್ದ ಸ್ಥಳದಿಂದ ₹ 2.32 ಲಕ್ಷ ಜಪ್ತಿ ಮಾಡಿಕೊಂಡಿದ್ದಾರೆ.
ನಗರದ ಜಯನಗರ ಕ್ರಾಸ್ ಸಮೀಪದ ದಾನೇಶ್ವರಿ ನಿಲಯದ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಸಿಸಿಬಿ ಇನ್ಸ್ಪೆಕ್ಟರ್ ಅರುಣಕುಮಾರ ನೇತೃತ್ವದ ತಂಡವು ದಾಳಿ ನಡೆಸಿ, 13 ಮಂದಿ ವಿರುದ್ಧ ಕ್ರಮಕೈಗೊಂಡಿದೆ.
ಪಣಕ್ಕೆ ಹಚ್ಚಿದ್ದ ₹ 69,180 ಸೇರಿದಂತೆ ₹ 2.11 ಲಕ್ಷ ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ತಾಲ್ಲೂಕಿನ ನದಿಸಿನ್ನೂರ ಗ್ರಾಮದ ವ್ಯಾಪ್ತಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಐದು ಆರೋಪಿಗಳ ವಿರುದ್ಧ ಫರಹತಾಬಾದ್ ಠಾಣೆ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ. ಪಣಕ್ಕೆ ಹಚ್ಚಿದ್ದ ₹ 590 ಸೇರಿದಂತೆ ಒಟ್ಟು ₹ 5,730 ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಲಬುರಗಿ ಸಬರ್ಬನ್ ಠಾಣೆಯ ಪೊಲೀಸರು ಕಲಬುರಗಿ ತಾಲ್ಲೂಕಿನ ಬಬಲಾದ್ (ಎಸ್) ಗ್ರಾಮದ ಲಕ್ಷ್ಮಿ ನಗರದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಒಂಬತ್ತು ಮಂದಿ ವಿರುದ್ದ ಕಾನೂನು ಕ್ರಮಕೈಗೊಂಡಿದ್ದಾರೆ. ಆರೋಪಿಗಳಿಂದ ಒಟ್ಟು ₹ 15,550 ಜಪ್ತಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.