
ಕಲಬುರಗಿ: ನಗರದ ಕರುಣೇಶ್ವರ ನಗರದಲ್ಲಿರುವ ಜೈವೀರ ಹನುಮಾನ ಮಂದಿರದಲ್ಲಿ ಭಾನುವಾರ ಜೈವೀರ ಹನುಮಂತ ದೇವರ ವರ್ಧಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವರ್ಧಂತಿ ಪ್ರಯುಕ್ತ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ವಿವಿಧ ಪಾರಾಯಣ ಸಂಘಗಳ ವತಿಯಿಂದ ವಿಶೇಷ ಪಾರಾಯಣ ನಡೆಯಿತು. ಜೈವೀರ ಹನುಮಾನ ಭಜನಾ ಮಂಡಳಿ ಮಹಿಳೆಯರು ಭಜನೆ, ಪಲ್ಲಕ್ಕಿ ಉತ್ಸವ, ಮಂಗಳಾರತಿ ನಡೆಯಿತು.
ವರ್ಧಂತಿ ಮಹೋತ್ಸವದ ನಿಮಿತ್ತವಾಗಿ ಆಕ್ಸಿಲೈಫ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದೊಂದಿಗೆ ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ರಕ್ತಹೀನತೆ, ಸಾಮಾನ್ಯ ಆರೋಗ್ಯ ಸಮಸ್ಯೆಗಳ ಕುರಿತು ವೈದ್ಯರು ತಪಾಸಣೆ ನಡೆಸಿ, ಅಗತ್ಯ ಸಲಹೆ ನೀಡಿದರು. ವೈದ್ಯರು ಮತ್ತು ಸಿಬ್ಬಂದಿಗೆ, ಜೈವೀರ ಹನುಮಾನ ದೇವಸ್ಥಾನ ಅಭಿವೃದ್ಧಿ ಸಂಘದ ವತಿಯಿಂದ ಅಭಿನಂದನೆ ಹಾಗೂ ಗೌರವ ಸಲ್ಲಿಸಲಾಯಿತು.
ದೇವಸ್ಥಾನದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಕಾರ್ಯದರ್ಶಿ ವಿಶ್ವಾಸ್ ಮೋಘೇಕರ, ವಿನುತಕುಮಾರ ಜೋಶಿ, ಶ್ರೀನಿವಾಸ್ ಜಹಾಗೀರದಾರ, ಗುರುರಾಜ ಭರತನೂರು, ಶಂಕರರಾವ ಸಿಂದಗಿಕರ, ವಿಜಯ ಕುಲಕರ್ಣಿ, ಶಾಮರಾವ ಕುಲಕರ್ಣಿ, ವ್ಯವಸ್ಥಾಪಕ ಚಂದ್ರಕಾಂತ ಕಡಗಂಚಿ, ಆಕ್ಸಿಲೈಫ್ ಆಸ್ಪತ್ರೆ ವೈದ್ಯ ಡಾ.ವಿಜಯ ಸಿಂಹ, ಡಾ.ರಶ್ಮಿಕಾ, ಡಾ.ಶ್ರುತಿಕಾ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.