ಕಲಬುರಗಿ: ಪ್ರತಿ ವರ್ಷ ಕುಡಿಯುವ ನೀರಿನ ಹಾಗೂ ಅಂತರ್ಜಲ ಕುಸಿತದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳಿಗೆ ಈ ಬಾರಿ ವರುಣ ಕೃಪೆ ತೋರಿದ್ದು, ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ 115 ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿವೆ.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 169 ಕೆರಗಳಿವೆ. 52 ಕೆರೆಗಳು ಶೇ 51–99ರಷ್ಟು, ಶೇ 31–50ರಷ್ಟು ಒಂದು, ಶೇ 1ರಿಂದ 30ರಷ್ಟು ಒಂದು ಕೆರೆ ಭರ್ತಿಯಾಗಿದೆ. 34,954.82 ಮಿಲಿಯನ್ ಕ್ಯೂಬಿಕ್ ಫೀಟ್ಗಳಷ್ಟು ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ಸರ್ಕಾರದ ವಿವಿಧ ಯೋಜನೆಗಳ ಅನುದಾನದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಕೆರೆಗಳು ಭರ್ತಿಯಾಗುವುದರ ಜೊತೆ ಒಡಲಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಹಿಡಿದಿಟ್ಟುಕೊಂಡಿವೆ.
ಜಿಲ್ಲೆಯಲ್ಲಿಯೇ ಚಿಂಚೋಳಿ ಕ್ಷೇತ್ರದಲ್ಲಿ ಅತಿ ಹೆಚ್ಚು ಕೆರೆ ನೀರಾವರಿ ಕ್ಷೇತ್ರ ಹೊಂದಿದ್ದು, ತಾಲ್ಲೂಕು ವ್ಯಾಪ್ತಿಯಲ್ಲಿರುವ ಪೈಕಿ 18 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಶೇ 1ರಿಂದ 30ರಷ್ಟು ಒಂದು, ಶೇ 31–50ರಷ್ಟು ಒಂದು, ಶೇ 51–99ರಷ್ಟು ಒಂದು ಕೆರೆ ಭರ್ತಿಯಾಗಿದೆ. ಇದರಿಂದ ಅಂದಾಜು ₹7,218 ಹೆಕ್ಟೇರ್ ಪ್ರದೇಶಕ್ಕೆ ಈ ಕೆರೆ ನೀರಿನಿಂದ ಅನುಕೂಲವಾಗಲಿದೆ.
ಆಳಂದ ತಾಲ್ಲೂಕು ವ್ಯಾಪ್ತಿಯಲ್ಲಿ 33 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಶೇ 51–99ರಷ್ಟು ಎರಡು ಕೆರೆ ಭರ್ತಿಯಾಗಿವೆ. ಪ್ರತಿವರ್ಷ ಅಂತರ್ಜಲ ಕುಸಿತವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಮಳೆ ನೆರವಾಗಿದೆ.
ಅಫಜಲಪುರ ತಾಲ್ಲೂಕಿನ ನಾಲ್ಕು, ಚಿತ್ತಾಪುರ ತಾಲ್ಲೂಕಿನ ಹನ್ನೊಂದು, ಜೇವರ್ಗಿ ತಾಲ್ಲೂಕಿನ ಆರು, ಕಾಳಗಿಯ ನಾಲ್ಕು, ಕಲಬುರಗಿಯ ಏಳು, ಕಮಲಾಪುರ ತಾಲ್ಲೂಕಿನ 29, ಯಡ್ರಾಮಿಯ ಮೂರು ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.
ಸೇಡಂ ತಾಲ್ಲೂಕಿನ 34 ಕೆರೆಗಳು, ಅಫಜಲಪುರ 8, ಆಳಂದ ಎರಡು, ಚಿಂಚೋಳಿ, ಚಿತ್ತಾಪುರದ ತಲಾ ಒಂದು, ಕಲಬುರಗಿಯ ಐದು, ಶಹಾಬಾದ್ನ ಒಂದು ಕೆರೆ ಶೇ 51–99ರಷ್ಟು ಭರ್ತಿಯಾಗಿದ್ದು, ಚಿಂಚೋಳಿ ತಾಲ್ಲೂಕಿನ ನಾಗಾಯಿದಲಾಯಿ ಕೆರೆ ಮಾತ್ರ ಶೇ 1ರಿಂದ 30ರಷ್ಟು ಭರ್ತಿಯಾಗಿವೆ.
ಜಿಲ್ಲೆಯ 11 ತಾಲ್ಲೂಕು ವ್ಯಾಪ್ತಿಯಲ್ಲಿ 29,013.9 ಹೆಕ್ಟೇರ್ ಪ್ರದೇಶದಲ್ಲಿ ಕೆರೆ ನೀರಾವರಿ ಪ್ರದೇಶ ಆವರಿಸಿಕೊಂಡಿದೆ. ಮಳೆ ಆಶ್ರಿತ ರೈತರು ನೀರಿನ ಸಮಸ್ಯೆಯಾದಾಗ ಅಲ್ಪಾವಧಿ ಬೆಳೆಗಳಿಗೆ ಅತಿ ಅವಶ್ಯವಾದಾಗ ಈ ನೀರನ್ನು ಬಳಸುತ್ತಾರೆ. ಕುಡಿಯುವ ನೀರು ಮತ್ತು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳು ಜನರ ಜೀವನ ಆಧಾರವಾಗಿವೆ.
‘ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೆರೆ–ಕಟ್ಟೆಗಳು ಭರ್ತಿಯಾಗುತ್ತಿವೆ. ಇದರಿಂದ ಅಂತರ್ಜಲ ಮಟ್ಟದಲ್ಲಿಯೂ ಏರಿಕೆಯಾಗಲಿದೆ. ಕೆರೆ ಆಶ್ರಿತ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆದು ಕೃಷಿಯಲ್ಲಿ ತೊಡಗಿರುವ ರೈತರಿಗೂ ಅನುಕೂಲ ಆಗಲಿದೆ. ಬೇಸಿಗೆಯಲ್ಲಿ ಜನ–ಜಾನುವಾರಗಳಿಗೂ ಕುಡಿಯುವ ನೀರಿನ ಕೊರತೆಯೂ ತಗ್ಗಲಿದೆ’ ಎನ್ನುತ್ತಾರೆ ಸೇಡಂ ತಾಲ್ಲೂಕಿನ ರೈತ ಶರಣಪ್ಪ.
ಉತ್ತಮ ಮಳೆಯಾಗಿದ್ದರಿಂದ ಕೆರೆಗಳು ಭರ್ತಿಯಾಗಿದ್ದು ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಲಿದೆ ನಾಗನಗೌಡ ಬಾವಿ ಕಾರ್ಯಪಾಲಕಎಂಜಿನಿಯರ್ ಸಣ್ಣ ನೀರಾವರಿ ವಿಭಾಗ ಕಲಬುರಗಿ
ಕೆರೆಗಳಲ್ಲಿ ಸಂಗ್ರಹಿಸಿದ ನೀರು ಸಮರ್ಪಕವಾಗಿ ರೈತರಿಗೆ ಬಳಕೆಯಾಗುವಂತೆ ಸರ್ಕಾರ ಯೋಜನೆ ರೂಪಿಸಬೇಕುಭೀಮಶೆಟ್ಟಿ ಮುಕ್ಕಾ ನೀರಾವರಿ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.