ಮಹಾಂತೇಶ ಪುರಾಣಿಕ
ಕಲಬುರಗಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾಮಗಾರಿಯ ಕ್ರಿಯಾ ಯೋಜನೆ ಮಾಡಿಕೊಡಲು ₹20 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಯಡ್ರಾಮಿ ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಮತ್ತು ಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ವಶಕ್ಕೆ ಪಡೆದರು.
ಪ್ರಭಾರ ಇಒ ಮಹಾಂತೇಶ ಪುರಾಣಿಕ ಮತ್ತು ಗ್ರಾ.ಪಂ. ಕಾರ್ಯದರ್ಶಿ ಅರವಿಂದ ಸಾಹು ಕುರಳಗೇರಾ ಲಂಚ ಪಡೆದ ಆರೋಪಿಗಳು. ಮಳ್ಳಿ ಗ್ರಾಮದ ನಬಿಲಾಲ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ನಬಿಲಾಲ್ ಅವರಿಗೆ ನರೇಗಾ ಕಾಮಗಾರಿಯ ಕ್ರಿಯಾ ಯೋಜನೆ ಮಾಡಿಕೊಡಲು ಸಾಕಷ್ಟು ಬಾರಿ ಅಲೆದಾಡಿಸಿದರು. ₹40 ಸಾವಿರ ಲಂಚ ಕೊಟ್ಟರೆ ಮಾಡಿಸಿಕೊಡುವುದಾಗಿ ಇಒ ಹಾಗೂ ಕಾರ್ಯದರ್ಶಿ ಬೇಡಿಕೆ ಇಟ್ಟಿದ್ದರು. ಮಂಗಳವಾರ ತಾ.ಪಂ. ಕಚೇರಿಯಲ್ಲಿ ₹20 ಸಾವಿರ ಲಂಚದ ಹಣ ಪಡೆಯುವ ವೇಳೆ ಮಹಾಂತೇಶ ಹಾಗೂ ಅರವಿಂದ ಅವರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಡಿಎಸ್ಪಿ ಮಂಜುನಾಥ್ ಗಂಗಲ್. ಇನ್ಸ್ಪೆಕ್ಟರ್ ಧ್ರುವತಾರ ಸೇರಿ ಸಿಬ್ಬಂದಿ ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.