ಕಲಬುರಗಿ: ನಗರದ ಕನ್ನಡ ಭವನ ಎದುರಿನ ನಿರ್ಮಲಾದೇವಿ ಸ್ಯಾನಿಟೇಷನ್ ಅಂಗಡಿಯ ಶಟರ್ ಮುರಿದು ₹ 2.60 ಲಕ್ಷ ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಎಂದಿನಂತೆ ಸೆ.10ರಂದು ರಾತ್ರಿ 10 ಗಂಟೆಗೆ ಅಂಗಡಿ ಮುಚ್ಚಲಾಗಿತ್ತು. ಸೆ.11ರ ನಸುಕಿನ 4 ಗಂಟೆಗೆ ಅಂಗಡಿಯ ವಾಚ್ಮನ್ ಫೋನ್ ಮಾಡಿ ಶಟರ್ ಮುರಿದು ಅಂಗಡಿಯಲ್ಲಿ ಕಳವು ನಡೆದಿರುವ ವಿಷಯ ಹೇಳಿದರು. ನಾನು ಅಂಗಡಿಗೆ ಸಿ.ಸಿ. ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದೆ. ಯಾರೋ ಕಳ್ಳರು ಶಟರ್ ಮುರಿದು ಅಂಗಡಿಗೆ ನುಗ್ಗಿ, ಬಿಲ್ ಕೌಂಟರ್ನ ಡ್ರಾ ಮುರಿದು ಅದರಲ್ಲಿದ್ದ ₹ 2.60 ಲಕ್ಷ ಕದ್ದಿದ್ದಾರೆ. ತಡರಾತ್ರಿ 2 ಗಂಟೆಯಿಂದ 3 ಗಂಟೆ ಅವಧಿಯಲ್ಲಿ ಈ ಕಳ್ಳತನ ನಡೆದಿದೆ’ ಎಂದು ಅಂಗಡಿಯ ಮ್ಯಾನೇಜರ್ ಪ್ರಭುಕುಮಾರ ಮೂಲಗೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹ 8 ಲಕ್ಷ ಮೌಲ್ಯದ ಮುರುಮ್ ಲೂಟಿ: ಆರೋಪ
ಕೆಸರಟಗಿಯಲ್ಲಿರುವ ಮೂರು ನಿವೇಶನಗಳಿಗೆ ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿಗಳಿಬ್ಬರು 300 ಲಾರಿಗಳಷ್ಟು ಮುರುಮ್ ತುಂಬಿಕೊಂಡು ಹೋಗಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
‘ಕೆಸರಟಗಿಯ ಸರ್ವೇ ನಂಬರ್ 253, 254, 255ರಲ್ಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ 30 ಆಳ ಮಾಡಿ ₹ 8 ಲಕ್ಷ ಮೌಲ್ಯದ 300 ಲಾರಿಗಳಷ್ಟು ಮುರಮ್ ತುಂಬಿಕೊಂಡು ಹೋಗಿದ್ದಾರೆ. ಈ ಕುರಿತು ಕೇಳಿದರೆ ಮೊದಲಿಗೆ ನಿಮ್ಮ ಜಾಗ ಭರ್ತಿ ಮಾಡಿಕೊಡುವುದಾಗಿ ಹೇಳಿದ್ದರು. ನನ್ನ ಪತಿ ವಿಚಾರಿಸಿದಾಗ ಅವರಿಗೆ ಅವಾಚ್ಯವಾಗಿ ಬೈದಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ, ಖಲಾಸ್ ಮಾಡುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದಾರೆ’ ಎಂದು ನಗರದ ಧರಿಯಾಪುರದ ಜಿಡಿಎ ಬಡಾವಣೆಯ ನಿವಾಸಿ ಗುರುದೇವಿ ಮಾಡಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ಇಬ್ಬರು ಆರೋಪಿಗಳ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕುಳ ಆರೋಪ
‘ತಂದೆ ಮನೆಯಿಂದ ಒಂದು ನಿವೇಶನ ತೆಗೆದುಕೊಂಡು ಬಾ. ಇಲ್ಲವೇ ವಿಚ್ಛೇದನ ಕೊಟ್ಟು ನಮ್ಮ ಮನೆ ಬಿಟ್ಟು ಹೋಗುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ. ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾರೆ’ ಎಂದು ಆರೋಪಿಸಿ ನಗರದ ಬಿಲಾಲ್ಬಾದ್ ಕಾಲೊನಿ ನಿವಾಸಿ ಆಯೇಶಾ ಸಿದ್ದಿಕಾ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಮಹಿಳೆಯ ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.