ಜೇವರ್ಗಿ: ಅಪಘಾತಗೊಂಡ ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-50 ರ ಬೈಪಾಸ್ ರಸ್ತೆ ಮೇಲೆ ಶನಿವಾರ ಬೆಳಗಿನ ಜಾವ ನಡೆದಿದೆ.
ಶನಿವಾರ ಬೆಳಗಿನ ಜಾವ ಹೆದ್ದಾರಿ ಮೇಲೆ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಅಂಕಲಗಾ ಗ್ರಾಮದ ಚಾಲಕ ಸಾದಿಕ್ ಅಬ್ಬಾಸ್ ಗಂಭೀರವಾಗಿ ಗಾಯಗೊಂಡು ಹೊರಬರಲಾಗದೇ ಲಾರಿಯಲ್ಲಿ ಸಿಲುಕಿಕೊಂಡಿದ್ದನು.
ಪೊಲೀಸರು ಹರಸಾಹಸ ಪಟ್ಟರು ಚಾಲಕನನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕ ಸಿಬ್ಬಂದಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ತೀವ್ರವಾಗಿ ಗಾಯಗೊಂಡಿದ್ದ ಚಾಲಕನನ್ನು ಹೊರತೆಗೆದು ರಕ್ಷಿಸಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು.
ಅಗ್ನಿಶಾಮಕ ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಹಲಗೇರಾ, ಜೇವರ್ಗಿ ಪ್ರಭಾರ ಅಧಿಕಾರಿ ತಿರುಮಲರೆಡ್ಡಿ, ಅಗ್ನಿಶಾಮಕ ಸಿಬ್ಬಂದಿ ಚನ್ನಬಸಪ್ಪ ಗೋಗಿ, ಮಂಜುನಾಥ, ಸಂಗಪ್ಪ ಲೋಣಿ, ಚಿದಾನಂದ, ದೌಲಸಾಬ, ವೀರಭದ್ರಪ್ಪ, ಶಾಂತಪ್ಪ ಪಟ್ಟೇದ್, ಚಾಲಕರಾದ ವಿಜಯ ರಾಠೋಡ, ರಾಘವೇಂದ್ರ ರೆಡ್ಡಿ, ತಯ್ಯಬಲಿ, ರವಿ, ಸೌರವ, ಪ್ರದೀಪ, ಸತೀಶ್ ಪಾಟೀಲ ಇದ್ದರು. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.