ADVERTISEMENT

ಕಲಬುರ್ಗಿ: ಸಿಡಬ್ಲೂಸಿ ಸದಸ್ಯ ನ ವಿರುದ್ದ ಎಫ್‍ಐಆರ್

ಸಮಿತಿ ಅದ್ಯಕ್ಷರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 9:45 IST
Last Updated 7 ಜೂನ್ 2020, 9:45 IST
ಕಲಬುರ್ಗಿಯ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿ ಕಳವು ಮಾಡಿದ ಆರೋಪದ ಮೇರೆಗೆ ಬ್ರಹ್ಮಪುರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ
ಕಲಬುರ್ಗಿಯ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿ ಕಳವು ಮಾಡಿದ ಆರೋಪದ ಮೇರೆಗೆ ಬ್ರಹ್ಮಪುರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ   

ಕಲಬುರ್ಗಿ: ‘ಮಕ್ಕಳ ಹಕ್ಕುಗಳ ವಿಷಯದಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾ ಮಟ್ಟದ ಸಮಿತಿಯೊಂದರ ಅಧ್ಯಕ್ಷೆಗೆ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಸದಸ್ಯನ ವಿರುದ್ಧ ಶನಿವಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಸೂರ್ಯಕಾಂತ ಕುದಮೂಡ ಆರೋಪ ಎದುರಿಸುತ್ತಿರುವವರು. ಈ ಹಿಂದೆಯೇ ಲೈಂಗಿಕ ದೌರ್ಜನ್ಯ ದೂರು ನಿವಾರಣಾ ಸಮಿತಿಯ ಮುಂದೆ ಈ ಪ್ರಕರಣ ಬಂದಿತ್ತು.

‘ಏಪ್ರಿಲ್‌ 24ರಂದು ಪ್ರಕರಣವೊಂದರ ಮಾಹಿತಿ ಕಲೆ ಹಾಕಲು ಬೈಕ್‌ನಲ್ಲಿ ಹೋಗುತ್ತಿರುವಾಗ, ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಈ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ಮಾನಸಿಕವಾಗಿ ಆಘಾತ, ನೋವು ಮತ್ತು ಹಿಂಸೆಯಾಗಿದೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇನ್‍ಸ್ಪೆಕ್ಟರ್ ಸಂಗಮೇಶ ಪಾಟೀಲ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

ADVERTISEMENT

ರೈತ ಆತ್ಮಹತ್ಯೆ

ಕಲಬುರ್ಗಿ ತಾಲ್ಲೂಕಿನ ನದಿ ಸಿಣ್ಣೂರ ಗ್ರಾಮದಲ್ಲಿ ಶನಿವಾರ ಸಾಲ ಬಾಧೆ ತಾಳದೆ ರೈತ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಾನಂದ ಶ್ರೀಮಂತ (35) ಆತ್ಮಹತ್ಯೆಗೆ ಶರಣಾದವರು. ಇವರ ತಾಯಿ ಹೆಸರಿನಲ್ಲಿ ಜಮೀನಿದ್ದು ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್ ಮತ್ತು ಖಾಸಗಿ ಸಂಸ್ಥೆಗಳಿಂದ ₹ 8 ಲಕ್ಷ ಸಾಲ ಮಾಡಿಕೊಂಡಿದ್ದರು. ಇದರಿಂದಾಗಿ ಕಂಗೆಟ್ಟು ಜೂನ್‌ 4ರಂದು ವಿಷ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ನಗರದ ಖಾಸಗಿ ಅಸ್ಪತ್ರೆಯಲ್ಲಿ ದಾಖಲಿಸಿದಾಗಿತ್ತು. ಶನಿವಾರ ಸಂಜೆ ಕೊನೆಯುಸಿರೆಳೆದರು.

ಇನ್‍ಸ್ಪೆಕ್ಟರ್ ಎಂ.ಬಿ.ಚಿಕ್ಕಣ್ಣನವರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂಜಾ ಸಾಮಗ್ರಿ ಕಳವು: ಬಂಧನ

ನಗರದ ವಿವಿಧ ದೇವಾಲಯಗಳಲ್ಲಿ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು, ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನು ರಕ್ಷಿಸಿದ್ದಾರೆ. ಇವರಿಂದ ಪೂಜಾ ಸಾಮಗ್ರಿಗಳು ಹಾಗೂ 8 ಬೈಕ್‍ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಸತೀಶಕುಮಾರ ತಿಳಿಸಿದ್ದಾರೆ.

ವಿನಾಯಕ ನಾರಬಂಡಿ, ಸೋಹೆಲ್ ಟಾಂಗೇವಾಲೆ, ಮಹ್ಮದ ಗೌಸ್ ಮಹ್ಮದ ಉಮೇರ್ ಹಾಗೂ ಮನೋಜ ಕಾಂಬಳೆ ಬಂಧಿತರು.

ಇಲ್ಲಿನ ಶರಣನಗರದ ಪ್ರಸನ್ನ ಗಣಪತಿ ದೇವಸ್ಥಾನದ ಪೂಜಾ ಸಾಮಗ್ರಿ ಕಳ್ಳತನ ಮಾಡಿರುವ ಬಗ್ಗೆ ಸಿದ್ಧಭಟ್ ಜೋಶಿ ಅವರು ದೂರು ನೀಡಿದ್ದರು. ಅದರ ಆಧಾರದ ಮೇಲೆ ಡಿಸಿಪಿ ಕಿಶೋರಬಾಬು ಮತ್ತು ಎಸಿಪಿ ವಿಜಯಕುಮಾರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಕಪಿಲ್‍ದೇವ ಮತ್ತು ಸಿಬ್ಬಂದಿ ತನಿಖೆ ನಡೆಸಿ ಅರೋಪಿಗಳನ್ನು ಬಂಧಿಸಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.