ಕಲಬುರ್ಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಅಂಗವಾಗಿ ಜಿಲ್ಲೆಯ ಕನ್ನಡಪರ ಸಂಘಟನೆಗಳವರಿಗೆ ಸಮ್ಮೇಳನದ ಸ್ವಾಗತ ಸಮಿತಿ ಏರ್ಪಡಿಸಿದ್ದ ಕಾಗುಣಿತ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾರೂ ಮುಂದೆ ಬಂದಿಲ್ಲ! ಹೀಗಾಗಿ ಈ ಸ್ಪರ್ಧೆ ನಡೆಯುತ್ತಿಲ್ಲ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಈ ಸಂಘಟನೆಗಳವರನ್ನು ಕಲಾವಿದರನ್ನಾಗಿ ತೊಡಗಿಸಿಕೊಳ್ಳಲು ಸಮಿತಿ ಚಿಂತನೆ ನಡೆಸಿದೆ.
‘ರಸಪ್ರಶ್ನೆ, ಕಾಗುಣಿತ ಉಕ್ತಲೇಖನ (ಡಿಕ್ಟೇಷನ್), ಉಲ್ಲೇಖಗಳನ್ನು ಬರೆಯುವುದು, ಪ್ರಬಂಧ, ಆಶುಭಾಷಣ ಹಾಗೂ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜ.28ರ ಒಳಗಾಗಿ ಹೆಸರು ನೋಂದಾಯಿಸಲು ತಿಳಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸಂಬಂಧಿಸಿದ ಸಂಘಟನೆಗಳವರನ್ನು ಸಂಪರ್ಕಿಸಿದರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾರೂ ಮುಂದೆ ಬಂದಿಲ್ಲ’ ಎಂದು ಸಮ್ಮೇಳನದ ಕೋಶಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶರತ್ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.
‘ಕನ್ನಡಪರ ಸಂಘಟನೆಗಳವರನ್ನು ಮೆರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಇದೆ. ಈ ವಿಷಯವಾಗಿ ಕನ್ನಡಪರ ಸಂಘಟನೆಗಳವರೊಂದಿಗೆ ಚರ್ಚಿಸುತ್ತೇನೆ. ಅವರು ಬಯಸಿದರೆ ಹುಲಿವೇಷ ಕುಣಿತದ ತರಬೇತಿ ಕೊಡಿಸಿ, ಈ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡುತ್ತೇವೆ’ ಎಂದರು.
ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯನ್ನು ಎರಡೂವರೆ ಕಿ.ಮೀ.ಗೆ ಮಿತಿಗೊಳಿಸಲಾಗಿದೆ. ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ. ಸರ್ಕಾರದಿಂದ ಅನುದಾನ ಶೀಘ್ರವೇ ಬಿಡುಗಡೆಯಾಗಲಿದ್ದು, ಸ್ಥಳೀಯವಾಗಿ ದೇಣಿಗೆ ಸಂಗ್ರಹ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.