ADVERTISEMENT

ಕಲಬುರ್ಗಿ ಕೋವಿಡ್‌ಗೆ ಮತ್ತಿಬ್ಬರ ಸಾವು

ಕೋವಿಡ್‌ನಿಂದ ಸಾವು ಪ್ರಕರಣ; ಎರಡನೇ ಸ್ಥಾನದಲ್ಲೇ ಮುಂದುವರಿದ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 16:27 IST
Last Updated 12 ಜೂನ್ 2020, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿನಿಂದ ಮತ್ತೆ ಇಬ್ಬರು ಮೃತಪಟ್ಟಿದ್ದು ಶುಕ್ರವಾರ ಖಚಿತವಾಗಿದೆ. ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗಲೇ ಇಬ್ಬರೂ ಸಾವಿಗೀಡಾದರು. ಇವರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ.

ನಗರದ ಎಂ.ಎಸ್.ಕೆ.ಮಿಲ್ ಪ್ರದೇಶದ 53 ವರ್ಷದ ಪುರುಷ ಮತ್ತು ಚಿಂಚೋಳಿ ತಾಲ್ಲೂಕಿನ ಕೆರೊಳ್ಳಿ ಗ್ರಾಮದ 48 ವರ್ಷದ ಪುರುಷ ಮೃತಪಟ್ಟವರು. ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಜೂನ್ 9ರಂದು ಈ ಇಬ್ಬರನ್ನೂ ಜಿಮ್ಸ್‌ಗೆ ದಾಖಲಿಸಲಾಗಿತ್ತು. ಜೂನ್ 10ರಂದು ಮೃತಪಟ್ಟಿದ್ದಾರೆ. ಅವರ ಗಂಟಲು ಮಾದರಿಯ ವರದಿ ಶುಕ್ರವಾರ ಹೊರಬಿದ್ದಿದೆ ಎಂದು ಜಿಮ್ಸ್‌ ಮೂಲಗಳು ತಿಳಿಸಿವೆ.

20 ಹೊಸ ಪ್ರಕರಣ ದಾಖಲು

ADVERTISEMENT

ಶುಕ್ರವಾರ ಮತ್ತೆ 20 ಮಂದಿಗೆ ಕೊರೊನಾ ವೈರಾಣು ಅಂಟಿಕೊಂಡಿದೆ. ಇವರಲ್ಲಿ 16 ಮಂದಿ ಮಹಾರಾಷ್ಟ್ರದ ವಿವಿಧ ನಗರಗಳಿಂದ ಮರಳಿ ಬಂದವರು. ನಗರದ ಶಹಾಬಜಾರ್‌ (ಜಿಡಿಎ ಕಾಲೊನಿ)ಯ 31 ವರ್ಷದ ಯುವಕ ಹಾಗೂ ಕಮಲಾಪುರ ತಾಲ್ಲೂಕಿನ ಜೀವಣಗಿ ಗ್ರಾಮದ 26 ವರ್ಷದ ಯುವತಿಗೆ‌ ಹಾಗೂ ಇಬ್ಬರು ಮೃತಪಟ್ಟವರೂ ಸೇರಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 816ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 461.

7 ವರ್ಷದ ಬಾಲಕ, 16 ವರ್ಷದ ಬಾಲಕ, 11 ವರ್ಷದ ಬಾಲಕಿ, 12 ವರ್ಷದ ಇನ್ನೊಬ್ಬ ಬಾಲಕಿ, 31 ವರ್ಷದ ಪುರುಷ, 26 ವರ್ಷದ ಮಹಿಳೆ, 36 ವರ್ಷದ ಮಹಿಳೆ, 54 ವರ್ಷದ ಪುರುಷ, 36 ವರ್ಷದ ಇನ್ನೊಬ್ಬ ಪುರುಷ, 60 ವರ್ಷದ ವೃದ್ಧೆ, 23 ವರ್ಷದ ಮಹಿಳೆ, 42 ವರ್ಷದ ಮಹಿಳೆ, 34 ವರ್ಷದ ಪುರುಷ, 30 ವರ್ಷದ ಮಹಿಳೆ, 23 ವರ್ಷದ ಯುವತಿ, 53 ವರ್ಷದ ಪುರುಷ, 25 ವರ್ಷದ ಯುವತಿ, 48 ವರ್ಷದ ಪುರುಷ, 28 ವರ್ಷದ ಮಹಿಳೆ, 38 ವರ್ಷದ ಮಹಿಳೆ ಸೋಂಕತರು.

ಕ್ವಾರಂಟೈನ್‌ ಕೇಂದ್ರಗಳ ಅವಧಿ ಮುಗಿದ ಬಳಿಕ ಇವರು ತಮ್ಮ ತಾಂಡಾಗಳಿಗೆ ಮರಳಿದ್ದರು. ಗಂಟಲು ಮಾದರಿಯನ್ನು ತಪಾಸಣೆಗೆ ಕಳುಹಿಸಿದ ಎರಡು ವಾರದ ನಂತರ ವರದಿ ಬಂದಿದ್ದು, ಅದರಲ್ಲಿ 20 ಮಂದಿ ಪಾಸಿಟಿವ್ ಇರುವುದು ಗೊತ್ತಾಗಿದೆ. ನಗರದ ‘ಡೆಡಿಕೇಟೆಕಡ್‌ ಕೋವಿಡ್‌ ಹೆಲ್ತ್‌ ಸೆಂಟರ್‌’ಗೆ ದಾಖಲಿಸಲಾಗಿದೆ.

ಗೊಬ್ಬರವಾಡಿಯಲ್ಲಿ 6 ಪಾಸಿಟಿವ್‌

ಕಮಲಾಪುರ: ತಾಲ್ಲೂಕಿನ ಗೊಬ್ಬರವಾಡಿ ಗ್ರಾಮದಲ್ಲಿನ 6 ಮಂದಿ ಹಾಗೂ ಕಿಣ್ಣಿ ಸಡಕ್ ಗ್ರಾಮದಲ್ಲಿನ ಒಬ್ಬ ಮಹಿಳೆಗೆ ಶುಕ್ರವಾರ ಕೋವಿಡ್ ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಜಿಮ್ಸ್‌ಗೆ ಕಳುಹಿಸಲಾಗಿದೆ. ಇಲ್ಲಿನ ಶಾಲೆಯಲ್ಲಿ 14 ದಿನ ಕ್ವಾರಂಟೈನ್‍ಗೆ ಒಳಗಾಗಿ ಮನೆಗೆ ತೆರಳಿದ್ದರು.

23 ವರ್ಷದ ಯುವತಿ, 11 ವರ್ಷದ ಬಾಲಕಿ, ಒಂದೇ ಕುಟುಂಬದ 34 ವರ್ಷದ ವ್ಯಕ್ತಿ, 30 ವರ್ಷದ ಪತ್ನಿ 12 ವರ್ಷದ ಪುತ್ರಿ ಮತ್ತು 7 ವರ್ಷದ ಪುತ್ರನಿಗೆ ಸೊಂಕು ತಗುಲಿದೆ. ಕಿಣ್ಣಿ ಸಡಕ್‍ನಲ್ಲಿ 42 ವರ್ಷದ ಮಹಿಳೆಗ ಸೋಂಕು ತಗುಲಿದೆ.

ಗೊಬ್ಬರವಾಡಿ ಗ್ರಾಮದಲ್ಲಿ ಜೂನ್ 4 ರಂದು ಇಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಈಗ ಒಟ್ಟು 8 ಮಂದಿಗೆ ಸೊಂಕು ತಗುಲಿದೆ. ಸೋಂಕಿತರಿದ್ದ ಪ್ರದೇಶದಲ್ಲಿಯೇ ಶಾಲೆ ಇದೆ.

ಯುವತಿಗೆ ಕೋವಿಡ್

ಪಟ್ಟಣದ ಲಿಂಬಿತೋಟದ (ಮಹಾತ್ಮಗಾಂಧಿ ನಗರ) 25 ವರ್ಷದ ಯುವತಿಗೆ ಕೋವಿಡ್ ಧೃಡಪಟ್ಟಿದೆ. ಮುಂಬೈಯಿಂದ ಬಂದ ಯುವತಿಯನ್ನು ಅಫಜಲಪುರ‌ದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಶನಿವಾರ ಲಿಂಬಿತೋಟವನ್ನು ಕಂಟೇನ್ಮೆಟ್‌ ಝೋನ್ ಮಾಡಲಾಗುವುದು. ಪ್ರಾಥಮಿಕ ಸಂಪರ್ಕದವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ತಾಲ್ಲೂಕಿನಲ್ಲಿ ಈವರೆಗೆ ತಾಲ್ಲೂಕಿನಲ್ಲಿ 12 ಪ್ರಕರಣಗಳು ಧೃಡಪಟ್ಟಿದ್ದು, 8 ಜನ ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರತ್ನಾಕರ ತೋರಣ ತಿಳಿಸಿದ್ದಾರೆ.

ಒಂದೇ ದಿನ 60 ಜನ ಗುಣಮುಖ

ನಗರದ ಕೋವಿಡ್‌ ಆಸ್ಪ‍ತ್ರೆಗಳಲ್ಲಿ ಚಿಕಿತ್ಸೆ ಪಡೆದು ಸೋಂಕು ಮುಕ್ತರಾದ 60 ಮಂದಿಯನ್ನು ಒಂದೇ ದಿನ ಮನೆಗೆ ಕಳುಹಿಸಲಾಯಿತು. ಇವರೊಂದಿಗೆ ಈವರೆಗೆ ಗುಣಮುಖರಾದವರ ಸಾಂಖ್ಯೆ ಕೂಡ 345ಕ್ಕೆ ಏರಿದೆ.

ಕಾಳಗಿ ತಾಲ್ಲೂಕಿನ 12, ಚಿತ್ತಾಪುರ ತಾಲ್ಲೂಕಿನ 22, ಅಫಜಲಪುರ ತಾಲ್ಲೂಕಿನ 3, ಸೇಡಂ ತಾಲ್ಲೂಕಿನ 14, ಚಿಂಚೋಳಿ ತಾಲ್ಲೂಕಿನ 5, ಜೇವರ್ಗಿ, ಕಲಬುರ್ಗಿ, ಶಹಾಬಾದ್‌ ಹಾಗೂ ಕಮಲಾಪುರ ತಾಲ್ಲೂಕಿನ ತಲಾ ಒಬ್ಬ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಗುಣಮುಖರಾದವರಲ್ಲಿ ಇದೂವರೆಗಿನ ಅತಿದೊಡ್ಡ ಸಂಖ್ಯೆ ಇದು. ವಾರದ ಹಿಂದೆ 45 ಮಂದಿ ಗುಣಮುಖರಾಗದ್ದರು. ಸದ್ಯ ಕೋವಿಡ್‌ ಗೆದ್ದವರೆಲ್ಲ ಮಹಾರಾಷ್ಟ್ರದಿಂದ ಮರಳಿ ಬಂದ ವಲಸೆ ಕಾರ್ಮಿಕರೇ ಆಗಿದ್ದಾರೆ. ಶುಕ್ರವಾರ ಎಲ್ಲರಿಗೂ ಹೂ ನೀಡುವ ಮೂಲಕ ಅವರವರ ತಾಂಡಾಗಳಿಗೆ ವಿಶೇಷ ವಾಹನದಲ್ಲಿ ಬೀಳ್ಕೊಡಲಾಯಿತು. ಮುಂದಿನ 28 ದಿನ ಹೊಂ ಕ್ವಾರಂಟೈನ್‌ ಆಗಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.