ಕಾಳಗಿ: ತಾಲ್ಲೂಕಿನೆಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ.
ತೇವಾಂಶಕ್ಕೆ ತೊಗರಿ, ಸೋಯಾ, ಹತ್ತಿ, ಕಬ್ಬು ಹಾಳಾಗುವ ಭಯ ರೈತರಲ್ಲಿ ಕಾಡುತ್ತಿದೆ. ರಾಶಿಗೆ ಬಂದ ಹೆಸರು, ಉದ್ದು ಬಿಡಿಸಿಕೊಳ್ಳಲಾಗದೆ ಹೊಲದಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿ ಅನ್ನದಾತರು ಕಂಗಲಾಗಿದ್ದಾರೆ.
ಕಾಳಗಿ ಪಟ್ಟಣದ ಬಸ್ ನಿಲ್ದಾಣ ಬಳಿ ಹಾದುಹೋಗಿರುವ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ ಕಿತ್ತುಹೋಗಿ ತಗ್ಗುಬಿದ್ದು ಮಳೆನೀರು ನಿಂತಿದೆ.
ಹೇರೂರ (ಕೆ) ಬೆಣ್ಣೆತೊರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದ್ದು, ಗುರುವಾರ 14 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ನದಿಪಾತ್ರದ ಹಳೆಹೆಬ್ಬಾಳ, ಕಣಸೂರ, ಮಲಘಾಣ, ತೆಂಗಳಿ ಗ್ರಾಮಸ್ಥರಿಗೆ ನದಿತೀರಕ್ಕೆ ಜನ-ಜಾನುವಾರು ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸೇಡಂ ಸಂಪರ್ಕಿಸುವ ಭೂತ್ಪೂರ-ರುದ್ನೂರ ನಡುವಿನ ಹೆದ್ದಾರಿ ಸೇತುವೆ ಮುಳುಗಡೆಯಾಗಿದ್ದು, ಕಾಳಗಿ, ಚಿಂಚೋಳಿ ತಾಲ್ಲೂಕು ಸಂಪರ್ಕ ರಸ್ತೆ ಸಂಚಾರ ಮಾರ್ಗ ಸ್ಥಗಿತಗೊಂಡಿದೆ.
ಚಿಂಚೋಳಿ (ಎಚ್) ರಾಜ್ಯಹೆದ್ದಾರಿ ಮೇಲೆ ಮಳೆನೀರು ಅಧಿಕವಾಗಿ ನಿಂತಿದ್ದರಿಂದ ಚಿಂಚೋಳಿ (ಎಚ್)-ಸುಗೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಅಶೋಕನಗರ ಮಾರ್ಗ ಬದಲಾವಣೆಯಲ್ಲಿ ಸಂಚರಿಸುತ್ತಿವೆ.
ಚಿತ್ತಾಪುರ ತಾಲ್ಲೂಕಿನ ದಂಡೋತಿ ಸೇತುವೆ ಮುಳುಗಡೆಯಾಗಿದ್ದರಿಂದ ಕಾಳಗಿ-ಚಿತ್ತಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದ ವಾಹನಗಳು ತೆಂಗಳಿ ಕ್ರಾಸ್ ವರೆಗೆ ಮಾತ್ರ ಸಂಚರಿಸಿದವು.
‘ಬೆಣ್ಣೆತೊರಾ ಜಲಾಶಯದ ಹೆಚ್ಚುವರಿ ನೀರು ಹೊರಬಿಟ್ಟಿದ್ದರಿಂದ ಅಕ್ಕಪಕ್ಕದ ಜಮೀನುಗಳ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಬೇಕು’ ಎಂದು ಹೆಬ್ಬಾಳ ಗ್ರಾ.ಪಂ ಸದಸ್ಯೆ ರುಕ್ಮಿಣಿ ಭೀಮಾಶಂಕರ, ಮಲಘಾಣ ಮಾಜಿ ಸದಸ್ಯೆ ಅಂಜನಾದೇವಿ ನಾಮದಾರ, ರಾಜಕುಮಾರ ನಾಮದಾರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.