ಕಾಳಗಿ: ‘ಮುಂಗಾರು ಅತಿವೃಷ್ಟಿಯಿಂದಾಗಿ ಕಾಳಗಿ ತಾಲ್ಲೂಕಿನಲ್ಲಿ ಹತ್ತು ಸಾವಿರ ಹೆಕ್ಷೇರ್ ಬೆಳೆ ಹಾನಿಯಾಗಿ, 62 ಮನೆಗಳು ಬಿದ್ದಿವೆ’ ಎಂದು ಬೀದರ್ ಸಂಸದ ಸಾಗರ ಖಂಡ್ರೆ ಹೇಳಿದರು.
ತಾಲ್ಲೂಕಿನ ಕೊರವಿ, ಸೇರಿ, ಕೋಡ್ಲಿ, ಕುಡಳ್ಳಿ, ಕಾಳಗಿ, ರಟಕಲ್ ವಿವಿಧೆಡೆ ಬೆಳೆಹಾನಿಯಾದ ಹೊಲಗಳಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ಸಲುವಾಗಿ ಕೆಲ ಹೊಲಗಳಿಗೆ ಸ್ವತಃ ಭೇಟಿ ನೀಡಿದ್ದೇನೆ. ಸುಮಾರು 16 ಸಾವಿರ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ನೀರಾವರಿ ಜಮೀನಿದ್ದರೆ ಒಂದು ಹೆಕ್ಷೇರ್ಗೆ ₹ 17 ಸಾವಿರ ಹಾಗೂ ನೀರಾವರಿ ಇಲ್ಲದಿದ್ದಲ್ಲಿ 2 ಹೆಕ್ಷೇರ್ಗೆ ₹17 ಸಾವಿರ ಪರಿಹಾರ ನೀಡಲಾಗುವುದು. ಬೆಳೆವಿಮೆ ಮಾಡಿಸಿದವರಿಗೆ ಪರಿಹಾರ ಕೊಡಿಸಲಾಗುವುದು. ಬೆಳೆಹಾನಿಯಾದ ಬಗ್ಗೆ ಮೂರು ದಿನಗಳಲ್ಲಿ ರೈತರು ಕಡ್ಡಾಯವಾಗಿ ದೂರು ಸಲ್ಲಿಸಬೇಕು’ ಎಂದರು.
‘ಅತಿವೃಷ್ಟಿಯಿಂದ ಹಾನಿಯಾದ ಬಗ್ಗೆ ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ರೈತರಿಗೆ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ಬಸಲಿಂಗಪ್ಪ ಡಿಗ್ಗಿ, ಕೃಷಿ ಸಹಾಯಕ ನಿರ್ದೇಶಕ ಸಂಜುಕುಮಾರ ಮಾನಕರ್, ಕೃಷಿ ಅಧಿಕಾರಿ ಸರೋಜಾ ಕಲಬುರಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಎ., ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಬಸವಣಪ್ಪ ಹೂಗಾರ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.