ಟಂಟಂ ವಾಹನ ಪಲ್ಟಿಯಾದ ದೃಶ್ಯ
ಕಾಳಗಿ: ಟಂಟಂ ವಾಹನ ಪಲ್ಟಿಯಾಗಿ ಶಾಲಾ ಕಾಲೇಜಿನ ಏಳು ಬಾಲಕಿಯರು ಹಾಗೂ ಒಬ್ಬ ವೃದ್ಧೆ ಗಾಯಗೊಂಡಿರುವ ಘಟನೆ ಕಮಲಾಪುರ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಟಂಟಂ ವಾಹನದಲ್ಲಿ ಸಂಚರಿಸುತ್ತಿದ್ದ ಹಲಚೇರಾ ಗ್ರಾಮದ ವೃದ್ಧೆ ಬಸಮ್ಮ ವಿಶ್ವನಾಥ ಸೇರಿ (65), ಬುಗಡಿತಾಂಡಾದ 9ನೇ ತರಗತಿ ಬಾಲಕಿ ಪ್ರಿಯಾಂಕಾ ರವಿ (15) ಎಂಬುವರಿಗೆ ಗಂಭೀರ ಗಾಯಗಳಾಗಿವೆ.
ಗೋಗಿ ಗ್ರಾಮದ 1ನೇ ತರಗತಿ ಬಾಲಕಿ ಸಮೃದ್ಧಿ ವಿನೋದ (7), ಬುಗಡಿ ತಾಂಡಾದ ಪಿಯುಸಿ ವಿದ್ಯಾರ್ಥಿನಿಯರಾದ ಸುಮಿತ್ರಾ ತಾರಾಸಿಂಗ್ ಚವಾಣ್ (18), ಗೀತಾ ರವಿ ರಾಠೋಡ (18), 10ನೇ ತರಗತಿಯ ನಿಶಾ ರಮೇಶ ರಾಠೋಡ (16) ಮತ್ತು 9ನೇ ತರಗತಿಯ ನಿಖಿತಾ ಮೋಹನ ರಾಠೋಡ (15), ನಿಶಾ ರಾಮು ರಾಠೋಡ (15) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಎಲ್ಲಾ ಗಾಯಾಳುಗಳಿಗೆ ಆಂಬುಲೆನ್ಸ್ ಮುಖಾಂತರ ಕಲಬುರಗಿಯ ಟ್ರಾಮಾ ಸೆಂಟರ್ ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಅರಣಕಲ್ ಪಿ.ಎಚ್.ಸಿ ಪ್ರಭಾರ ವೈದ್ಯ ಡಾ.ದೀಪಕುಮಾರ ರಾಠೋಡ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.
ಡಿಎಚ್ಒ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ್ ಟ್ರಾಮಾ ಸೆಂಟರ್ ಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.