ADVERTISEMENT

ಕಲಬುರಗಿ | ಡಿ.21 ರಂದುಪಾಲಿಕೆ ನಿವೃತ್ತ ನೌಕರರ ಪ್ರತಿಭಟನೆ: ವೀರಭದ್ರ ಸಿಂಪಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 13:57 IST
Last Updated 17 ಡಿಸೆಂಬರ್ 2023, 13:57 IST
ವೀರಭದ್ರ ಸಿಂಪಿ
ವೀರಭದ್ರ ಸಿಂಪಿ   

ಕಲಬುರಗಿ: ‘10 ವರ್ಷ ದಿನಗೂಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿ ಬಳಿಕ ಕಾಯಂ ಗೊಂಡು ನಿವೃತ್ತರಾದ ಮಹಾನಗರ ಪಾಲಿಕೆ ನೌಕರರಿಗೆ ಇತರ ಇಲಾಖೆಗಳ ನಿವೃತ್ತ ನೌಕರರಿಗೆ ನೀಡುವ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಡಿಸೆಂಬರ್ 21 ರಂದು ಬೆಳಿಗ್ಗೆ 11ಕ್ಕೆ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಅರ್ಹತಾದಾಯಕ ಹೆಚ್ಚುವರಿ ಸೇವೆ 248/ಎ ನೀಡದ ಕಾರಣ ಪಾಲಿಕೆ ನಿವೃತ್ತ ನೌಕರರಿಗೆ ಪೂರ್ಣ ಪ್ರಮಾಣದ ಪಿಂಚಣಿ ಮೊತ್ತ ಸಿಕ್ಕಿಲ್ಲ. ಮಾಸಿಕ ಪಿಂಚಣಿಯೂ ಕಡಿಮೆಯಾಗಿದೆ. ಸರ್ಕಾರ ಕಾಲ ಕಾಲಕ್ಕೆ ಘೋಷಿಸುವ ಆರ್ಥಿಕ ಲಾಭಾಂಶಗಳು ಕಡಿಮೆಯಾಗಿ ಅನ್ಯಾಯಕ್ಕೊಳಗಾಗಿದ್ದೇವೆ’ ಎಂದು ಹೇಳಿದರು.

ನಿವೃತ್ತ ನೌಕರರ ಸೇವಾ ಮಾಹಿತಿ ಕಳಿಸುವಂತೆ ಪೌರಾಡಳಿತ ನಿರ್ದೇಶನಾಲಯದವರು ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 6 ತಿಂಗಳಾದರೂ ಮಾಹಿತಿ ಕಳುಹಿಸಿಲ್ಲ. ಈ ಸಂಬಂಧ ಪಾಲಿಕೆ ಆಯುಕ್ತರು ಹಾಗೂ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಸ್ಪಂದಿಸಿಲ್ಲ. ನೌಕರರ ಸೇವಾ ವಿವರ ಕಳುಹಿಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿವೃತ್ತ ನೌಕರರಿಗೆ 248/ಎ ಅಡಿ ಸೌಲಭ್ಯ ಒದಗಿಸುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಡಿಸೆಂಬರ್ 21 ರಂದು ಮಹಾನಗರ ಪಾಲಿಕೆ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮೇಯರ್, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಶಿವಾಜಿ ಜಮಾದಾರ, ಶ್ರೀಕಂಠ ಶೆಟ್ಟಿ, ಎಚ್‌.ಸುಭಾಷ, ಸುಭಾಷ ದಿಗ್ಗಾಂವಿ, ರಾಮಚಂದ್ರ ರೆಡ್ಡಿ, ಅಕ್ರಮ ಅಹ್ಮದ, ಬಸವರಾಜ ಕೊಳಕೂರ ಹಾಗೂ ಕಲ್ಯಾಣಪ್ಪ ಬಿರಾದಾರ ಸೇರಿ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.