
ಕಾಳಗಿ: ‘ರಾಜ್ಯ ಸರ್ಕಾರ ಬಡವರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಪೈಕಿ ಪಂಚ ಗ್ಯಾರಂಟಿಗಳಲ್ಲಿ ಅನ್ನಭಾಗ್ಯವು ಒಂದು. ಆದರೆ, ಅನೇಕರು ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಅಕ್ಕಿ ಮಾರಾಟದಲ್ಲಿ ತೊಡಗಿದ್ದಾರೆ. ಅಂಥವರ ಮೇಲೆ ಮುಲಾಜಿಲ್ಲದೇ ಎಫ್ಐಆರ್ ಮಾಡಿಸಿ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಡಿ.ಗುತ್ತೇದಾರ ಹೇಳಿದರು.
ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
‘ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಅನೇಕರು ಸದುಪಯೋಗ ಪಡಿಸಿಕೊಳ್ಳುತ್ತಿದ್ದರೂ ಪ್ರಚಾರದ ಕೊರತೆ ಎದುರಾಗುತ್ತಿದೆ. ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯವಿದ್ದಲ್ಲಿ ನಮ್ಮನ್ನು ಬಳಸಿಕೊಳ್ಳಬೇಕು. ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಪ್ರಮಾಣಿಕವಾಗಿ ಯೋಜನೆ ತಲುಪಿಸಬೇಕು. ಏನೇ ತೊಡಕು ಉದ್ಭವಿಸಿದಲ್ಲಿ ನಮ್ಮ ಗಮನಕ್ಕೆ ತರಬೇಕು. ಒಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸಾರ್ಥಕಗೊಳಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಮಾತನಾಡಿದರು.
ಚಿತ್ತಾಪುರ ಸಿಡಿಪಿಒ ಆರತಿ ತುಪ್ಪದ, ಚಿಂಚೋಳಿ ಸಿಡಿಪಿಒ ಸವಿತಾ ಅವರು ಗೃಹಲಕ್ಷ್ಮೀ ಯೋಜನೆ, ಜೆಸ್ಕಾಂ ಎಇಇ ಮಹ್ಮದ ಇಲಿಯಾಸ್ ಗೃಹಜ್ಯೋತಿ ಯೋಜನೆ, ಆಹಾರ ಶಿರಸ್ತೇದಾರ ರೇವಣಸಿದ್ದಯ್ಯ ಮಠಪತಿ ಅನ್ನಭಾಗ್ಯ ಯೋಜನೆ, ಬಸ್ ಡಿಪೊ ಮೇಲ್ವಿಚಾರಕ ಪೀರಪ್ಪ ಶಕ್ತಿ ಯೋಜನೆ, ಕೌಶಲ್ಯಭಿವೃದ್ಧಿ ಎಫ್.ಡಿ.ಎ ಶರಣಪ್ಪ ಯುವನಿಧಿ ಯೋಜನೆ ಕುರಿತು ಪ್ರಗತಿ ವರದಿ ಮಂಡಿಸಿದರು.
ಪ್ರಾಧಿಕಾರದ ಸದಸ್ಯರಾದ ಮಹ್ಮದ ಘುಡುಸಾಬ ಕಮಲಾಪುರ, ಕಲ್ಯಾಣರಾವ ಡೊಣ್ಣೂರ, ಜಗನ್ನಾಥ ಪೂಜಾರಿ ತೇಗಲತಿಪ್ಪಿ, ದಿನೇಶ ತಳವಾರ ಮೊಘ, ಯಲ್ಲಾಲಿಂಗ ಬೆಂಕಿ, ಗೀತಾ ಸಿಂಗಶೆಟ್ಟಿ, ಗೋದಾವರಿ ದೊಡ್ಡಮನಿ ಇದ್ದರು. ಯೋಜನಾಧಿಕಾರಿ ಜ್ಯೋತಿ ರಾಜನಹಳ್ಳಿ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.