ಕಮಲಾಪುರ: ತಾಲ್ಲೂಕಿನ ಕುರಿಕೋಟ ಹೊಸ ಸೇತುವೆ ಮೇಲಿಂದ ಬೆಣ್ಣೆತೊರೆ ಹಿನ್ನೀರಿಗೆ ಹಾರಿದ್ದ ಯುವತಿ ಮೃತದೇಹ ಮಂಗಳವಾರ ಪತ್ತೆಯಾಗಿದೆ. ತಾಲ್ಲೂಕಿನ ಭೂಸಣಗಿ ಗ್ರಾಮದ ಸಾಕ್ಷಿ ಮನೋಜ ಉಪ್ಪಾರ (22) ಮೃತ ಯುವತಿ.
ಭೂಸಣಗಿಯಲ್ಲಿನ ಮನೆಯಿಂದ ತನ್ನ ಕಿರಿಯ ಸಹೋದರಿ ಜೊತೆ ತೆರಳಿದ್ದು, ಮಹಾಗಾಂವ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದರು. ಸಿರಗಾಪುರ ಕ್ರಾಸ್ ಬಳಿ ವಾಹನದಿಂದ ಇಳಿದಿದ್ದು, ಪಕ್ಕದಲ್ಲೇ ಇರುವ ಕುರಿಕೋಟ ಸೇತುವೆಯ ಮೇಲಿಂದ ನೀರಿಗೆ ಧುಮುಕಿದ್ದಾಳೆ.
ರಾಜನಾಳ ಗ್ರಾಮದ ಅಭಿಷೇಕ ನಾಮದೇವ ಮಾಳಗೆ ಎಂಬಾತ ಯುವತಿ ಸಾಕ್ಷಿ ಜೊತೆ ಸಲುಗೆಯಿಂದಿದ್ದ ಫೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಈ ಕುರಿತು ಸಾಕ್ಷಿ ಪೋಷಕರು ಜು.19ರಂದು ಮಹಾಗಾಂವ ಪೊಲೀಸ ಠಾಣೆಗೆ ದೂರು ನೀಡಿದ್ದರು. ಇದಾದ ಮೇಲೂ ಅಭಿಷೇಕ ಫೊಟೊ ಹರಿಬಿಟ್ಟಿದ್ದ. ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದು ಸಾಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿ ಪೋಷಕರು ಮಹಾಗಾಂವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.