
ಕಲಬುರಗಿ: ‘ಕನ್ನಡ ಅತ್ಯಂತ ಸರಳ ಭಾಷೆಯು ಹೌದು, ಕಠಿಣ ಭಾಷೆಯು ಹೌದು. ಭಾರತದಲ್ಲಿ ಭಾಷಾವಾರು ಪ್ರಾಂತ ವಿಂಗಡಣೆಯಾಗಿ ಕರ್ನಾಟಕ ರಾಜ್ಯ ರಚನೆಯಾಗಿರುವುದರಿಂದ ಕರ್ನಾಟಕ ಸರ್ಕಾರವು ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಕನ್ನಡವು ಅತ್ಯಂತ ಮಹತ್ವದ ಭಾಷೆಯಾಗಿದೆ’ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮೋರಗೆ ಪ್ರಕಾಶ ಅಭಿಪ್ರಾಯಪಟ್ಟರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಎಂ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಕನ್ನಡ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಯಾವುದೇ ಸರ್ಕಾರಿ ಹುದ್ದೆ ಪಡೆಯಬೇಕಾದರೂ ಕನ್ನಡ ಭಾಷಾ ಪರೀಕ್ಷೆ ಪಾಸಾಗುವುದು ಕಡ್ಡಾಯವಾಗಿದೆ. ಎಲ್ಲರೂ ಕನ್ನಡ ಕಲಿಯಬೇಕು ಮತ್ತು ಕನ್ನಡ ನಾಡು ನುಡಿಯನ್ನು ಗೌರವಿಸಬೇಕು’ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕಿ ಶೈಲಜಾ ಕೊಪ್ಪರ್ ಮಾತನಾಡಿ, ‘ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನದಲ್ಲಿ ನಿರತರಾಗಬೇಕು. ಸತತ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ. ಕಾಗುಣಿತ ದೋಷಗಳನ್ನು ಮಾಡಬಾರದು. ಬರವಣಿಗೆಯಲ್ಲಿ ಸಣ್ಣ ಸಣ್ಣ ವಾಕ್ಯಗಳನ್ನು ರಚಿಸಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಾಧನೆ ಮಾಡಿ ಉನ್ನತ ಹುದ್ದೆಗೇರಿದ್ದಾರೆ’ ಎಂದು ಪ್ರೋತ್ಸಾಹಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಿಯದರ್ಶಿನಿ ಅವರು ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಧ್ಯಾಪಕರಾದ ಭಾಗ್ಯಜ್ಯೋತಿ ಪಾಟೀಲ, ಅನಸೂಯಾ ಪಾಟೀಲ, ಸುವರ್ಣ ಹಿರೇಮಠ ಮಾತನಾಡಿದರು.
ಭವಾನಿ ಸ್ವಾಗತಿಸಿದರೆ, ಶ್ವೇತಾ ವಂದನಾರ್ಪಣೆ ಮಾಡಿದರು. ಮಂಜುಳಾ ಹಿರೇಗೌಡ ನಿರೂಪಿಸಿದರು.
ಸಿದ್ರಾಮಪ್ಪ ಬಣಗಾರ, ವಿದ್ಯಾವತಿ ಪಾಟೀಲ, ಲಕ್ಷ್ಮಿಕಾಂತ ಹೂಗಾರ, ಸುನಂದಾ, ಶೋಭಾದೇವಿ ರಾಠೋಡ ಹಾಗೂ ಎಂ.ಎ ಕನ್ನಡ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.