ಕಲಬುರಗಿ: ‘ಜಾತಿ ಮತಗಳನ್ನು ಮೀರಿದ ಅಂತಃಕರಣವುಳ್ಳ ಶರಣ ಸಂಕುಲವು ಸಾರ್ವಕಾಲಿಕ ಶ್ರೇಷ್ಠವಾಗಿದೆ’ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.
ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಕರಿಕಾಲ ಚೋಳ’ ನಾಟಕದ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿಭಿನ್ನ ನಾಟಕಗಳನ್ನು ಆಡುವ ಮೂಲಕ ಕಲಬುರಗಿ ರಂಗಾಯಣ ತಂಡವು ಸಮಾಜದ ಎಲ್ಲ ವರ್ಗಗಳನ್ನು ತಲುಪುವ, ಆ ಮೂಲಕ ಸಾಂಸ್ಕೃತಿಕ ಅರಿವನ್ನು ಮೂಡಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ’ ಎಂದರು.
‘ಕರಿಕಾಲ ಚೋಳ’ ನಾಟಕದ ರಚನೆಕಾರ ಮಹಾಂತೇಶ ನವಲಕಲ್ ಮಾತನಾಡಿ, ‘ಜಾತಿ ನಿರ್ಮೂಲನೆಯೇ ಶರಣರ ನಿಜವಾದ ಆಶಯಗಳಾಗಿದ್ದವು. ಇಂತಹ ಸೂಕ್ಷ್ಮ ವೈಚಾರಿಕ ವಸ್ತುವುಳ್ಳ ನಾಟಕವನ್ನು ಕಲಬುರಗಿ ರಂಗಾಯಣ ಕೈಗೆತ್ತಿಕೊಂಡು ಪ್ರದರ್ಶನ ಮಾಡಿದ್ದು ಅಭಿನಂದನೀಯ’ ಎಂದು ಹೇಳಿದರು.
ದಲಿತ ಮಾದಿಗ ಸಮನ್ವಯ ಸಮಿತಿ (ಡಿಎಂಎಸ್ಎಸ್) ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ಮಾತನಾಡಿದರು.
ಸೇಡಂನ ಗಣಪತರಾವ ಚಿಮ್ಮನಚೋಡಕರ್, ರಾಜಕುಮಾರ ಹೊಸಮನಿ, ದಿಗಂಬರ ತ್ರಿಮೂರ್ತಿ, ಅರುಂಧತಿ ನಾಗಮೂರ್ತಿ, ಶ್ರೀಮಂತ ಭಂಡಾರಿ, ಮಲ್ಲಿಕಾರ್ಜುನ ದಿನ್ನಿ, ಸುಭಾಷ ಕಾಂಬಳೆ, ಅಮೃತ ಕೊರಳ್ಳಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.