ಕಲಬುರಗಿ: ಇತ್ತೀಚೆಗೆ ಲಿಂಗೈಕ್ಯರಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಕುಟುಂಬ ವರ್ಗದವನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಧಾಬಾಯಿ ಖರ್ಗೆ ದಂಪತಿ ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಸಂಜೆ ಶರಣಬಸವೇಶ್ವರ ಸಂಸ್ಥಾನದ ಆವರಣದ ಮಹಾಮನೆಗೆ ಭೇಟಿ ನೀಡಿದ ಖರ್ಗೆ ಅವರು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ದಾಕ್ಷಾಯಣಿ ಅವ್ವ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹಾಗೂ ಪುತ್ರಿಯರನ್ನು ಭೇಟಿ ಮಾಡಿದರು
ಈ ಸಂದರ್ಭದಲ್ಲಿ ಅಪ್ಪ ಅವರ ಶೈಕ್ಷಣಿಕ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿದ ಖರ್ಗೆ ಅವರು, ಹೈದರಾಬಾದ್ ಕರ್ನಾಟಕದಂತಹ ಹಿಂದುಳಿದ ಪ್ರದೇಶದಲ್ಲಿ ಇಂಗ್ಲಿಷ್ ಕಲಿಕೆಯನ್ನು ಉತ್ತೇಜಿಸಿ ಆಧುನಿಕ ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಎಂಜಿನಿಯರಿಂಗ್ ಕಾಲೇಜು ಆರಂಭಿಸುವ ಮೂಲಕ ಯುವಜನತೆಗೆ ಉದ್ಯೋಗ ಪಡೆಯಲು ನೆರವಾಗಿದ್ದಾರೆ. ಅಕ್ಷರ ಕ್ರಾಂತಿಯ ಜೊತೆಗೆ ಸಂಸ್ಥಾನದ ಮಹತ್ತರ ಕೊಡುಗೆಯಾದ ದಾಸೋಹವನ್ನು ದಶಕಗಳ ಕಾಲ ಮುಂದುವರೆಸಿಕೊಂಡು ಬಂದಿದ್ದರು’ ಎಂದು ಸ್ಮರಿಸಿದರು.
ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಕಾಂಗ್ರೆಸ್ ಮುಖಂಡ ಶಿವಾನಂದ ಪಾಟೀಲ ಮರತೂರ, ಅಲ್ಲಮಪ್ರಭು ದೇಶಮುಖ, ರಾಷ್ಟ್ರೀಯ ಯುವ ಕಾಂಗ್ರೆಸ್ ಮುಖಂಡ ಚೇತನ್ ಗೋನಾಯಕ ಇತರರು ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.