
ಕಾಳಗಿ: ‘ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ನಿಗಮದ ಬಸ್ ಘಟಕದಲ್ಲಿ ಕರ್ತವ್ಯಕ್ಕೆ ರಜೆ ಹಾಕಿದರೂ ಗೈರು ಹಾಜರಿ ಎಂದು ನಮೂದಿಸಿ ನನ್ನ ಸಂಬಳ ಕಡಿತಗೊಳಿಸಿದ್ದಾರೆ’ ಎಂದು ಚಾಲಕ ಕಂ ನಿರ್ವಾಹಕ ಮಲ್ಲಿಕಾರ್ಜುನ ಮಾಣಿಕಪ್ಪ ಕೊರವಿ ಆರೋಪಿಸಿದ್ದಾರೆ.
‘ಬಸ್ ಘಟಕದ ವ್ಯವಸ್ಥಾಪಕ ಯಶ್ವಂತ ಯಾತನೂರ ಅವರನ್ನು ವಿಚಾರಿಸಿದರೆ, ಮೇಲ್ವಿಚಾರಕ ಪೀರಪ್ಪ ಹೆಸರು ಹೇಳುತ್ತಾರೆ. ಅವರಿಗೆ ಕೇಳಿದರೆ ಇವರ ಹೆಸರು ಹೇಳುತ್ತಾರೆ. ಟಿಕೆಟ್ ಮಶಿನ್ ತೆಗೆದುಕೊಂಡು ಸಂಜೆವರೆಗೆ ಡಿಪೊದಲ್ಲಿ ಕುಳಿತರೂ ಡ್ಯುಟಿ ನೀಡಿಲ್ಲ ಆದ್ದರಿಂದ ನಾನು ರಜೆ ಹಾಕಿದ್ದೆ. ಅದನ್ನು ಗೈರು ಹಾಜರಿ ಎಂದು ಪರಿಗಣಿಸಿದ್ದಾರೆ. ಇದೇ ತರಹ ವಾರದ ಎರಡು ರಜೆಯನ್ನು ಗೈರು ಹಾಜರಿ ಎಂದು ನಮೂದಿಸಿದ್ದಾರೆ. ಗಂಭೀರವಾಗಿ ಕೇಳಿದಾಗ ನವೆಂಬರ್ ತಿಂಗಳಲ್ಲಿ ಸರಿದೂಗಿಸೋಣ ಎಂದು ಹೇಳಿ ತಿಂಗಳು ಮುಗಿದರೂ ಲಂಚದ ಆಸೆಗೆ ಅವರು ಸರಿಪಡಿಸಿಲ್ಲ’ ಎಂದು ಆಪಾದಿಸಿದ್ದಾರೆ.
‘ಕರ್ತವ್ಯ ನಿರ್ವಹಿಸಿದರೂ ಕೆಲವೊಮ್ಮೆ ಗೈರಾಗಿ ನೋಡಿಕೊಂಡಿದ್ದಾರೆ. ಅಧಿಕಾರಿಗಳ ಈ ರೀತಿಯ ನಡತೆ ಆರು ತಿಂಗಳಿಂದ ಕಂಡುಬರುತ್ತಿದ್ದರೂ ಮುಗ್ಧ ಸಾರಿಗೆ ನೌಕರರು ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇಲಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಮೂರು ದಿನದ ಸಂಬಳ ಕಡಿತವಾಗಿದ್ದು ನಿಜ. ಪಗಾರ ಮಾಡುವಂತೆ ಮೇಲ್ವಿಚಾರಕರಿಗೆ ಹೇಳಿದ್ದೇನೆ. ಈ ತಿಂಗಳಲ್ಲಿ ಸರಿಪಡಿಸುವೆಯಶವಂತ ಯಾತನೂರ, ಡಿಪೊ ಮ್ಯಾನೇಜರ್ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.