ಚಿಂಚೋಳಿ: ದುಡಿಯಲೆಂದು ಮುಂಬೈ, ಪುಣೆ, ಹೈದರಾಬಾದ್ ಮುಂತಾದ ಕಡೆ ಹೋಗಿದ್ದ ವಲಸೆ ಕಾರ್ಮಿಕರು ಕೊರೊನಾ ಪ್ರಕರಣಗಳು ಉಲ್ಬಣಿಸುತ್ತಿರುವ ಕಾರಣ ಪುನಃ ಚಿಂಚೋಳಿ ತಾಲ್ಲೂಕಿಗೆ ಮರಳುತ್ತಿದ್ದಾರೆ.
ಪ್ರಸಕ್ತ ವರ್ಷ ಅಂದಾಜು 9 ಸಾವಿರಕ್ಕೂ ಹೆಚ್ಚು ಮಂದಿ ಮುಂಬೈಗೆ ಹೋಗಿದ್ದರು. ಇದರಲ್ಲಿ 4,500 ಮಂದಿ ಈಗಾಗಲೇ ಮರಳಿದ್ದಾರೆ. ಕೆಲವರು ಮುಂಬೈಯಲ್ಲೇ ಕಾಯಂ ನೆಲೆ ಕಂಡುಕೊಂಡಿದ್ದು, ಇನ್ನೂ 4 ಸಾವಿರ ಮಂದಿ ಮರಳುವವರಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿ ಚೆಕ್ಪೋಸ್ಟ್ ತೆರೆದು ಮರಳುತ್ತಿರುವ ಕಾರ್ಮಿಕರ ತಪಾಸಣೆ ನಡೆಸುತ್ತಿದ್ದಾರೆ.
‘ತಾಲ್ಲೂಕಿಗೆ ವಾಪಸ್ಸಾದ ವಲಸೆ ಕಾರ್ಮಿಕರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ವಲಸೆಯಿಂದ ಹಿಂದಿರುಗಿದ 600ಕ್ಕೂ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಜತೆಗೆ ಆಶಾ ಕಾರ್ಯಕರ್ತೆಯರಿಗೆ ಜಾಗ್ರತೆಯಿಂದ ಇರುವಂತೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಹಮ್ಮದ್ ಗಫಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ವರ್ಷ ಕ್ವಾರಂಟೈನ್ ಕೇಂದ್ರಗಳು ತೆರೆದಿದ್ದರಿಂದ ಗುಳೆಯಿಂದ ಮರಳಿದವರ ಮಾಹಿತಿ ಬೇಗ ಲಭಿಸುತ್ತಿತ್ತು. ಆದರೆ, ಈಗ ಮಾಹಿತಿ ಕಲೆ ಹಾಕುವುದು ಕಷ್ಟಸಾಧ್ಯ. ಕೊರೊನಾ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಪುರಸಭೆಗೆ ಇಬ್ಬರು ಮತ್ತು 4 ಗ್ರಾಮ ಪಂಚಾಯಿತಿಗೆ ಒಬ್ಬರಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ಗಳಾಗಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ಯಾ ಅವರು ನೇಮಿಸಿದ್ದಾರೆ’ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು.
‘ಕಂಟೇನ್ಮೆಂಟ್ ವಲಯಕ್ಕೆ ಕ್ರಮ’
ಚಿಂಚೋಳಿ ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. 100 ಮೀಟರ್ ಅಂತರದಲ್ಲಿ 5 ಜನರಲ್ಲಿ ಸೋಂಕು ದೃಢಪಟ್ಟಲ್ಲಿ, ಅಂತಹ ಸ್ಥಳಗಳನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಲಾಗುವುದು. ತಾಲ್ಲೂಕಿನ ಶಿವರೆಡ್ಡಿಪಳ್ಳಿ ಹಾಗೂ ಮರಪಳ್ಳಿ ಗ್ರಾಮದಲ್ಲಿ ಕಂಟೇನ್ಮೆಂಟ್ ವಲಯ ಘೋಷಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹಮ್ಮದ್ ಗಫಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.