ಕಲಬುರಗಿ: ‘ವಿದ್ಯುತ್ ಸಂಪರ್ಕವಿಲ್ಲದ ಕಾರಣ ರಾತ್ರಿ ಪೂರ್ತಿ ಮೈಯೆಲ್ಲಾ ಕಣ್ಣಾಗಿದ್ದು ಮಕ್ಕಳನ್ನು ತೋಳ ತೆಕ್ಕೆಯಲ್ಲಿಟ್ಟುಕೊಂಡು ಕಾಪಿಟ್ಟುಕೊಳ್ಳಬೇಕು. ದೂರದಿಂದ ನೀರು ಹೊತ್ತು ತರಲು ಕೆಲಸ ಬಿಟ್ಟು ಒಬ್ಬರು ಮನೆಯಲ್ಲಿರುವುದು ಅನಿವಾರ್ಯ. ಕಾಗದ–ಪತ್ರ ಇಲ್ಲದ ಕಾರಣ ಮಕ್ಕಳಿಗೆ ಶಾಲೆಯ ಮುಖ ನೋಡಲು ಸಾಧ್ಯವಾಗಿಲ್ಲ...’
ದಟ್ಟವಾದ ಮುಳ್ಳುಕಂಟಿಗಳ ನಡುವೆ ಅಲ್ಲಲ್ಲಿ ಖಾಲಿ ಜಾಗದಲ್ಲಿ ಬದುಕು ಹರಿವಿಕೊಂಡು ಕತ್ತಲೆಯಲ್ಲಿ ಬದುಕುತ್ತಿರುವ ರಾಮನಗರದ ಅಲೆಮಾರಿ ಸಮುದಾಯದ ಮಾರುತಿ ಅವರು ಅಸ್ಥಿರ ಬದುಕಿನ ತೊಳಲಾಟ ಬಿಚ್ಚಿಟ್ಟ ಪರಿ ಇದು.
ಹುಮನಾಬಾದ್ ವರ್ತುಲ ರಸ್ತೆಯಿಂದ ಆಳಂದ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ರಾಮನಗರ ಸಿಗುತ್ತದೆ. ಸಮತಟ್ಟಲ್ಲದ ನೆಲದಲ್ಲಿ ತಗ್ಗು–ಗುಂಡಿಗಳನ್ನು ಹಾದು ಮುಂದೆ ಸಾಗಿದರೆ ದಟ್ಟವಾದ ಮುಳ್ಳುಕಂಟಿ ಹಾಗೂ ಕಟ್ಟಡ ತ್ಯಾಜ್ಯ ಸುತ್ತುವರಿದ ಸ್ಥಳದಲ್ಲಿ ಈ ಕುಟುಂಬಗಳ ಜೋಪಡಿಗಳು ತಲೆ ಎತ್ತಿರುವುದು ಕಾಣಸಿಗುತ್ತದೆ.
ವಾರ್ಡ್ ಸಂಖ್ಯೆ–2ರ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ 45ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸವಾಗಿವೆ. ಇವರು ಜೀವನ ನಿರ್ವಹಣೆಗೆ ಪ್ಲಾಸ್ಟಿಕ್ ಬಿಂದಿಗೆ, ಪಾತ್ರೆ, ಪಿನ್ ಮಾರಾಟ ಹಾಗೂ ಕೂಲಿ ಕೆಲಸ ನೆಚ್ಚಿಕೊಂಡಿದ್ದಾರೆ.
ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಮೂಲಕ ಕೊರತೆ ಸುರುಳಿ ಬಿಚ್ಚಿಕೊಳ್ಳುತ್ತದೆ. ಶೌಚಾಲಯ, ಸೂರು, ದೂಳು, ರಸ್ತೆ ಸಮಸ್ಯೆ ಆ ಸುರುಳಿಯನ್ನು ದೊಡ್ಡದಾಗಿಸುತ್ತ ಸಾಗುತ್ತದೆ.
ಇಲ್ಲಿನ ಜನ ಮುಳ್ಳು–ಕಂಟಿಯ ನಡುವೆ ಮರೆಯಾಗಿ ಅಸ್ತಿತ್ವವೇ ಇಲ್ಲದವರಂತೆ ಜೀವಿಸುತ್ತಿದ್ದಾರೆ. ದೂಳು ಮೆತ್ತಿದ ತಾಡಪತ್ರಿಗಳೇ ಸೂರು, ಸ್ನಾನದ ಮನೆ. ನೀರಿನ ಸೌಕರ್ಯ ಇಲ್ಲದ ಕಾರಣ ಎಲ್ಲ ಋತುಗಳೂ ಅವರಿಗೆ ಬರಗಾಲದ ಅನುಭವವನ್ನು ನೀಡುತ್ತವೆ. ಬೆಳಕಿಗೆ ಅವರು ಇಂದಿಗೂ ಕಂದಿಲು ನೆಚ್ಚಿಕೊಂಡಿದ್ದಾರೆ. ಸುತ್ತಲು ಮುಳ್ಳು–ಕಂಟಿಗಳಿರುವ ಕಾರಣ ವಿಷಜಂತುಗಳ ಭಯವೂ ಅವರನ್ನು ಕಾಡುತ್ತಿದೆ.
‘ವಿದ್ಯುತ್, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿ’: ‘ನೀರು ತರಲು ಬಡಾವಣೆಗಳ ಮನೆಗಳಿಗೆ ತೆರಳಿದರೆ ಬಿಟ್ಟುಕೊಳ್ಳುವುದಿಲ್ಲ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ಬೈಗುಳ ತಿಂದು ಪ್ರಯಾಸಪಟ್ಟು ನೀರನ್ನು ಹೊತ್ತು ತರುತ್ತೇವೆ. ವಿದ್ಯುತ್ ಸೌಕರ್ಯ ಇಲ್ಲದ ಕಾರಣ ರಾತ್ರಿ ವೃದ್ಧರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತದೆ. ಕುಡಿಯುವ ನೀರು ಹಾಗೂ ವಿದ್ಯುತ್ ಸೌಕರ್ಯ ಒದಗಿಸಿದರೆ ಪುಣ್ಯ ಬರುತ್ತದೆ’ ಎಂದು ಮಹಿಳೆಯೊಬ್ಬರು ಕಣ್ಣೀರು ಒರೆಸಿಕೊಂಡರು.
‘ಅಲೆಮಾರಿಗಳು ವಾಸಿಸುತ್ತಿರುವ ಈ ಪ್ರದೇಶವು ಸರ್ಕಾರಿ–ಖಾಸಗಿ ಮಾಲೀಕತ್ವದ್ದಲ್ಲಿದೆ. ಇದನ್ನೇ ಮುಂದಿಟ್ಟುಕೊಂಡು ಇವರ ಬೇಕು–ಬೇಡಿಕೆಗಳಿಗೆ ಯಾರೂ ಕಿವಿಯಾಗುತ್ತಿಲ್ಲ. ನಾವು ಹಕ್ಕುಪತ್ರ ಕೇಳುತ್ತಿಲ್ಲ. ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮತ್ತು ನಿರ್ಮೂಲನೆ ಕಾಯ್ದೆಯಲ್ಲಿ ಸೌಕರ್ಯ ನೀಡಲು ಅವಕಾಶವಿದ್ದರೂ ಮಂಡಳಿ ಸೌಕರ್ಯ ನೀಡಲು ಮುಂದಾಗುತ್ತಿಲ್ಲ’ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರೇಣುಕಾ ಸರಡಗಿ ಆರೋಪಿಸಿದರು.ಅಧಿಕಾರಿಗಳು ಗಮನಹರಿಸಬೇಕು ಮಾರುತಿ ನಿವಾಸಿ
ಅಲೆಮಾರಿಗಳು ಕನಿಷ್ಠ ಸೌಕರ್ಯಗಳಿಲ್ಲದೆ ಜೀವಿಸುತ್ತಿದ್ದಾರೆ. ಸ್ಲಂ ಘೋಷಣೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸರ್ಕಾರ ಬೇಗ ಸೌಕರ್ಯ ಒದಗಿಸಬೇಕುರೇಣುಕಾ ಸರಡಗಿ ಜಿಲ್ಲಾ ಸಂಚಾಲಕಿ ಸ್ಲಂ ಜನಾಂದೋಲನ ಕರ್ನಾಟಕ ಸಂಘ
ಮಳೆಗಾಲದಲ್ಲಿ ಜೋಪಡಿಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತದೆ. ಮೂಲಸೌಕರ್ಯಗಳಿಲ್ಲದ ಕಾರಣ ಪ್ರಯಾಸದಿಂದ ಜೀವಿಸುತ್ತಿದ್ದೇವೆ.ಅಧಿಕಾರಿಗಳು ಗಮನಹರಿಸಬೇಕು ಮಾರುತಿ ನಿವಾಸಿ
ಸಮಸ್ಯೆ ಗಮನಕ್ಕೆ ಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದ್ದರೆ ಮಹಾನಗರ ಪಾಲಿಕೆಯವರು ಬಗೆಹರಿಸುತ್ತಾರೆ. ಈ ಸಂಬಂಧ ಪಾಲಿಕೆಗೆ ಮನವಿ ಮಾಡಲಾಗುವುದುಶ್ರೀಧರ ಸಾರವಾಡ ಎಇಇ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.