ಚಿಂಚೋಳಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಭಾರ ಪ್ರಾಂಶುಪಾಲರೇ ಜವಾನರಾಗಿ ಕೆಲಸ ಮಾಡುತ್ತಿದ್ದಾರೆ.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಅವರೇ ಕಾಲೇಜಿನ ಆಡಳಿತ ನಡೆಸಿಕೊಂಡು ಹೋಗುವುದರ ಜತೆಗೆ ಕಸಗುಡಿಸುವ ಜವಾಬ್ದಾರಿ ನಿಭಾಯಿಸುವುತ್ತಿದ್ದಾರೆ.
ಬೆಳಿಗ್ಗೆ ಮನೆಯಿಂದ ಬರುವ ಪ್ರಾಂಶುಪಾಲರು ಕಸಬಾರಿಗೆ ಕೈಗೆತ್ತಿಕೊಂಡು ಕಸ ಗುಡಿಸಿ ಕಾಲೇಜನ್ನು ಸ್ವಚ್ಛಗೊಳಿಸುತ್ತಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆಯಿಂದ ಪಿಯು ಕಾಲೇಜು ನರಳುತ್ತಿರುವುದರಿಂದಲೇ ಪ್ರಭಾರ ಪ್ರಾಂಶುಪಾಲರು ಕಾಲೇಜಿನಲ್ಲಿ ಕಸ ಗುಡಿಸುವಂತಾಗಿದೆ.
ಕಾಲೇಜಿನಲ್ಲಿ ಉಪನ್ಯಾಸಕರು–12, ಪ್ರಾಂಶುಪಾಲ–1, ಬೋಧಕೇತರ ಸಿಬ್ಬಂದಿ–2, ಡಿ ಗ್ರೂಪ್(ಜವಾನ)–1 ಹೀಗೆ ಒಟ್ಟು 16 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ ಪ್ರಾಂಶುಪಾಲರು ಸೇರಿದಂತೆ 13 ಹುದ್ದೆಗಳು ಖಾಲಿ ಇವೆ. ಇದರಿಂದ ಅತಿಥಿ ಉಪನ್ಯಾಸಕರನ್ನೇ ಕಾಲೇಜು ಅವಲಂಬಿಸಿದೆ. ವಿಜ್ಞಾನ ವಿಭಾಗದ 3 ಮತ್ತು ಕಲಾ ವಿಭಾಗದ ಒಬ್ಬ ಹೀಗೆ 4 ಕಾಯಂ ಉಪನ್ಯಾಸಕರಿದ್ದು, ಕಲಾ ವಿಭಾಗದ ಏಕೈಕ ಉಪನ್ಯಾಸಕರೇ ಪ್ರಭಾರ ಪ್ರಾಂಶುಪಾಲರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 282 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಸುಮಾರು 50 ವರ್ಷಗಳ ಚರಿತ್ರೆ ಹೊಂದಿರುವ ಈ ಕಾಲೇಜಿಗೆ ಕಟ್ಟಡದ ಸಮಸ್ಯೆ ಇಲ್ಲ. ಆದರೆ ಸಿಬ್ಬಂದಿ ಕೊರತೆಯಿಂದ ಕಾಲೇಜು ನರಳುತ್ತಿದೆ. ಇದನ್ನೇ ಈಗ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೆಗೇರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.