
ಆಳಂದ: ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿನ ರಾಘವ ಚೈತನ್ಯದ ಶಿವಲಿಂಗಕ್ಕೆ ಮಹಾಶಿವರಾತ್ರಿಯ ಅಂಗವಾಗಿ ಹಿಂದೂ ಸಂಘಟನೆಗಳ 14 ಮಂದಿ ಭಾನುವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ಪೂಜೆ ನಡೆಸಿದರು.
ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠವು ಎರಡು ಪ್ರತ್ಯೇಕ ಆದೇಶಗಳಲ್ಲಿ ಒಟ್ಟು 14 ಮಂದಿಗೆ ಶಿವಲಿಂಗ ಪೂಜೆಗೆ ಅನುಮತಿ ನೀಡಿತ್ತು. ಅದರಂತೆ ಅಷ್ಟೂಮಂದಿ ಒಟ್ಟಾಗಿ ಮಧ್ಯಾಹ್ನ 2.25ಕ್ಕೆ ದರ್ಗಾ ಆವರಣದ ಸಮೀಪ ಬಂದರು. ಅವರನ್ನು ಪೊಲೀಸರು ಭದ್ರತಾ ದೃಷ್ಟಿಯಿಂದ ತಪಾಸಣೆ ನಡೆಸಿದರು. ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ ನೇತೃತ್ವದಲ್ಲಿ ಅವರನ್ನು ದರ್ಗಾದೊಳಗೆ ಕರೆದೊಯ್ಯಲಾ ಯಿತು. ಸುಮಾರು ಒಂದೂವರೆ ಗಂಟೆ ರಾಘವ ಚೈತನ್ಯರ ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಭಜನೆ, ಕರ್ಪೂರದ ಆರತಿ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿ ಸಂಜೆ 4 ಗಂಟೆ ಹೊತ್ತಿಗೆ ಎಲ್ಲರೂ ಹೊರಬಂದರು.
ಎರಡು ದಿನಗಳಿಂದ ಲಾಡ್ಲೆ ಮಶಾಕ್ ದರ್ಗಾ ಹಾಗೂ ಪಟ್ಟಣದ ಮುಖ್ಯರಸ್ತೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ನಿಷೇಧಾಜ್ಞೆಯನ್ನೂ ವಿಧಿಸಲಾಗಿತ್ತು. ಬೆಳಿಗ್ಗೆಯಿಂದಲೇ ಜನರ ಓಡಾಟ, ವಾಹನಗಳ ಸಂಚಾರವೂ ಬಹುತೇಕ ಸ್ತಬ್ಧವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.