ADVERTISEMENT

‘ಗಿಡ ಉಳಿಸಿದರೆ ಉಸಿರು ಉಳಿದಂತೆ’

ತಾಡತೆಗನೂರ ವಿವೇಕಾನಂದ ವಿದ್ಯಾಪೀಠದಲ್ಲಿ ಸಸಿ ತಯಾರಿಸುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 9:57 IST
Last Updated 14 ಜುಲೈ 2019, 9:57 IST
ಕಲಬುರ್ಗಿ ತಾಲ್ಲೂಕಿನ ತಾಡತೆಗನೂರ ಗ್ರಾಮದ ವಿವೇಕಾನಂದ ವಿದ್ಯಾಪೀಠದ ಆವರಣದಲ್ಲಿ ಸಸಿಗಳನ್ನು ತಯಾರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು
ಕಲಬುರ್ಗಿ ತಾಲ್ಲೂಕಿನ ತಾಡತೆಗನೂರ ಗ್ರಾಮದ ವಿವೇಕಾನಂದ ವಿದ್ಯಾಪೀಠದ ಆವರಣದಲ್ಲಿ ಸಸಿಗಳನ್ನು ತಯಾರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು   

ಕಲಬುರ್ಗಿ: ಗಿಡಗಳನ್ನು ಬೆಳೆಸಿ ಉಳಿಸಿದರೆ ನಮ್ಮ ಉಸಿರು ಉಳಿದಂತೆ. ಏಕೆಂದರೆ ನಾವು ಉಸಿರಾಡಲು ಬೇಕಾದ ಆಮ್ಲಜನಕವನ್ನು ಪೂರೈಸುವುದೇ ಗಿಡ–ಮರಗಳು ಎಂದು ಫರಹತಾಬಾದ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಾಡತೆಗನೂರ ಗ್ರಾಮದ ವಿವೇಕಾನಂದ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ತಯಾರಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಗೋ ಸಂಪತ್ತಿನ ಜೊತೆಗೆ ಸಸ್ಯ ಸಂಪತ್ತಿನ ಮಹತ್ವದ ಕುರಿತೂ ಹೇಳಿದ್ದಾನೆ. ವಿವಿಧ ಕಾರಣಗಳಿಗಾಗಿ ಕಾಡು ನಾಶವಾಗುತ್ತಿರುವ ಸಂದರ್ಭದಲ್ಲಿ ಹಸಿರನ್ನು ಬೆಳೆಸುವುದು ಮತ್ತು ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗುವುದು ಅಗತ್ಯವಾಗಿದೆ ಎಂದರು.

ADVERTISEMENT

ಅಪ್ಪಿಕೊ ಚಳವಳಿಯ ನೇತಾರ ಸುಂದರಲಾಲ ಬಹುಗುಣ, ಸಾಲುಮರದ ತಿಮ್ಮಕ್ಕ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರಂತೆಯೇ ನಾವೆಲ್ಲ ಹಸಿರು ಅಭಿಯಾನದ ಭಾಗವಾಗಬೇಕು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊಣ್ಣೂರ ಮಾತನಾಡಿ, ‘ನಗರಗಳಲ್ಲಿ ಲಕ್ಷ ವೃಕ್ಷ ಅಭಿಯಾನವನ್ನು ಮಾಡುವ ಅಗತ್ಯವಿದ್ದು, ಪ್ರತಿಯೊಂದು ಅಂಗಡಿಗಳಲ್ಲಿಯೂ ಸಸಿಗಳನ್ನು ವಿತರಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಸಾರ್ವಜನಿಕರು ತಮ್ಮ ಮನೆಗಳು ಹಾಗೂ ಬಡಾವಣೆಗಳಲ್ಲಿ ಸಸಿಗಳನ್ನು ನೆಡಬೇಕು. ಇದಕ್ಕಾಗಿ 21 ಸಾವಿರ ಸಸಿಗಳನ್ನು ತಯಾರಿಸುವ ಕೆಲಸ ನಡೆದಿದೆ’ ಎಂದರು.

ವಿವೇಕಾನಂದ ವಿದ್ಯಾಪೀಠದ ಶಿಕ್ಷಕ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.