ಕಲಬುರಗಿ: ‘ಭಾರತವು ಭಾಷಾ ವೈವಿಧ್ಯದ ಭೂಮಿಯಾಗಿದೆ. ಇವು ಪರಸ್ಪರ ಸಂವಾದಿಸಿವೆ. ಹೀಗಾಗಿ ಭಾಷೆಗಳ ಈ ಸೌಹಾರ್ದ ಪರಂಪರೆ ಕಾಪಾಡಿಕೊಳ್ಳಬೇಕಾಗಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡೀನ್, ಲೇಖಕ ಪ್ರೊ. ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯ ಮತ್ತು ಸುಭಾಷ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ‘ಭಾಷೆ–ಬದುಕು’ ವಿಚಾರ ಸಂವಾದದಲ್ಲಿ ಮಾತನಾಡಿದ ಅವರು, ‘ಯಾವುದೇ ಭಾಷೆಯನ್ನು ಹೇರುವುದು ತಪ್ಪು. ಕನ್ನಡ ಬಳಕೆಯ ವಲಯಗಳು ಹೆಚ್ಚಬೇಕು. ಕನ್ನಡವನ್ನು ಹೊಸ ಕಾಲಕ್ಕೆ ಸಜ್ಜುಗೊಳಿಸುವ ಅಗತ್ಯವಿದೆ. ತಂತ್ರಜ್ಞಾನ ಮತ್ತು ಕನ್ನಡದ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು’ ಎಂದು ಅವರು ನುಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಮಾತನಾಡಿ, ‘2000 ವರ್ಷಗಳ ಇತಿಹಾಸ ಹೊಂದಿದ ಕನ್ನಡ ಭಾಷೆಯನ್ನು ಮರೆಯುತ್ತಾ, 600 ವರ್ಷಗಳ ಹಿಂದಿ ಭಾಷೆಗೆ ಜನರು ವ್ಯಾಮೋಹಗೊಳ್ಳುತ್ತಿರುವುದು ಭಾರಿ ವಿಷಾದಕರ ಸಂಗತಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಜಿ. ಡೊಳ್ಳೇಗೌಡರ ಮಾತನಾಡಿ, ‘ಕನ್ನಡ ನಮ್ಮ ಉಸಿರಾಗಲಿ, ಮನೆಯ ಮಾತಾಗಲಿ. ಎಲ್ಲ ಭಾಷೆಗಳನ್ನೂ ಕಲಿಯಿರಿ, ಆದರೆ ಕನ್ನಡ ಉಳಿಯಲಿ’ ಎಂದರು.
ಪುಸ್ತಕ ಬಿಡುಗಡೆ ಕಾರ್ಯವನ್ನು ವಿ.ವಿ. ಸಮಾಜ ವಿಜ್ಞಾನ ನಿಕಾಯದ ಡೀನ್ ಟಿ.ವಿ.ಶಿವಾನಂದನ್ ನೆರವೇರಿಸಿದರು. ಪತ್ರಾಗಾರ ಇಲಾಖೆಯ ಕಲಬುರಗಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಸ್ವಾಗತಿಸಿದರು.
ಚಿದಾನಂದ ಚಿಕ್ಕಮಠ ನಿರೂಪಿಸಿದರು. ಕರೆಣ್ಣ ದೇವಪುರ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಕೊನೇಕ, ಬಿ.ಎಚ್. ನಿರಗುಡಿ, ಸದಾನಂದ ಪೆರ್ಲ, ಚಿ.ಸಿ.ನಿಂಗಣ್ಣ, ವಿನೋದ ಜೇನವೇರಿ, ಶರಣಬಸಪ್ಪ ವಡ್ಡನಕೇರಿ, ಸಿದ್ದಣಗೌಡ ಕಡಣಿ, ಬಸವರಾಜ ಟೆಂಗಳಿ, ಗುಂಡಣ್ಣ ಡಿಗ್ಗಿ, ಅಂಬಾರಾಯ ಕೋಣೆ, ಚಂದ್ರಶೇಖರ ಪೂಜಾರಿ, ಗುಂಡಪ್ಪ ತಳವಾರ, ಲವಕುಶ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.