
ಕಲಬುರಗಿ: ‘ಭಾರತೀಯ ನ್ಯಾಯ ಶಾಸ್ತ್ರದ ಮೂಲಭೂತ ಅಂಶಗಳು ಬಹಳ ಪ್ರಬಲವಾಗಿವೆ ಮತ್ತು ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುತ್ತವೆ. ಆದ್ದರಿಂದ ಇದು ಬದಲಾಗುತ್ತಿರುವ ಡಿಜಿಟಲ್ ಜಗತ್ತನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ರಾಷ್ಟ್ರೀಯ ಕಾನೂನು ಆಯೋಗದ ಅಧ್ಯಕ್ಷರಾದ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹೇಳಿದರು.
ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗ ಆಯೋಜಿಸಿದ್ದ ‘ಯುಗಧರ್ಮ: ಡಿಜಿಟಲ್ ಯುಗದ ಬೇಡಿಕೆಗಳೊಂದಿಗೆ ನ್ಯಾಯ ಶಾಸ್ತ್ರವನ್ನು ರೂಪಗೊಳಿಸುವುದು’ ಕುರಿತ ಒಂದು ದಿನದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
‘ಈಗ ಡಿಜಿಟಲೀಕರಣ ಮತ್ತು ತಂತ್ರಜ್ಞಾನ ನಮ್ಮ ಜೀವನದ ಒಂದು ಭಾಗವಾಗಿದೆ. ಈ ಸಮ್ಮೇಳನವು ಆಧುನಿಕ ತಂತ್ರಜ್ಞಾನದೊಂದಿಗೆ ಸಾಂಪ್ರದಾಯಿಕ ಕಾನೂನು ಜ್ಞಾನದ ಸಂಗಮವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಭಾರತೀಯ ನ್ಯಾಯಶಾಸ್ತ್ರವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಬಗ್ಗೆ ನಾವು ಚರ್ಚಿಸಬೇಕು. ಸತ್ಯವು ನಮ್ಮ ನ್ಯಾಯ ಸಂಪ್ರದಾಯದ ಮೂಲಭೂತ ಅಂಶವಾಗಿದೆ. ನಮ್ಮ ನ್ಯಾಯ ಶಾಸ್ತ್ರವು ಬದಲಾಗುತ್ತಿರುವ ಕಾಲದೊಂದಿಗೆ ರೂಪಾಂತರಗೊಂಡಿದೆ ಮತ್ತು ವಿಕಸನಗೊಂಡಿದೆ. ತಂತ್ರಜ್ಞಾನದ ಯುಗದಲ್ಲಿ ಮನೋಧರ್ಮ, ಸಮತೋಲನ, ದಕ್ಷತೆ, ಸಹಾನುಭೂತಿ, ನಾವೀನ್ಯತೆ, ಸಮಗ್ರತೆ, ವೇಗ, ಮಾತಿನೊಂದಿಗೆ ಸೂಕ್ಷ್ಮತೆಯ ಕುರಿತ ಚರ್ಚೆಯು ಬಹಳ ದೂರ ಸಾಗುತ್ತದೆ’ ಎಂದು ಹೇಳಿದರು.
ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ‘ಭಾರತೀಯ ಮೌಲ್ಯಗಳು ಎಡಪಂಥೀಯ ಅಥವಾ ಬಲ ಪಂಥೀಯ ಅಲ್ಲ ಅಥವಾ ಕೇಂದ್ರದಲ್ಲಿರುತ್ತವೆ ಎಂದೂ ಅಲ್ಲ. ಅವು ಯಾವಾಗಲೂ ಸತ್ಯ ಮತ್ತು ಸತ್ಯದ ಕಡೆ ಇರುತ್ತವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಭಾರತವನ್ನು ಸೇರಿಸುವ ಬಗ್ಗೆ ಒತ್ತು ನೀಡಿದರು’ ಎಂದರು.
ಸಂವಿಧಾನದ ಯಶಸ್ಸಿನಲ್ಲಿ ಭಾರತೀಯ ಮೌಲ್ಯಗಳ ಮಹತ್ವದ ಬಗ್ಗೆ ಮಾತನಾಡಿದ ಅವರು, ‘ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಭರ್ಮಾ ಮುಂತಾದ ದೇಶಗಳು ತಮ್ಮದೇ ಆದ ಸಂವಿಧಾನಗಳನ್ನು ಹೊಂದಿದ್ದವು. ಅವುಗಳಿಗೆ ಏನಾಯಿತು? ಅವು ಕಾನೂನುಬದ್ಧ ಆತ್ಮಹತ್ಯೆಗೆ ಏಕೆ ಶರಣಾದವು? ನಮ್ಮ ಸಂವಿಧಾನ ಏಕೆ ಪ್ರವರ್ಧಮಾನಕ್ಕೆ ಬರುತ್ತಿದೆ? ಇದೆಲ್ಲವಕ್ಕೂ ಕಾರಣ ದೇಶದ ಮೌಲ್ಯ ವ್ಯವಸ್ಥೆ. ಭಾರತೀಯ ಮೌಲ್ಯಗಳು ನಾಗರಿಕರ ಹೃದಯದಲ್ಲಿರುವವರೆಗೆ ನಮ್ಮ ಸಂವಿಧಾನ ಉಳಿಯುತ್ತದೆ. ಆದ್ದರಿಂದ ಅದು ಡಿಜಿಟಲ್ ಯುಗವಾಗಲಿ ಅಥವಾ ಕೃತಕ ಬುದ್ಧಿಮತ್ತೆ ಯುಗವಾಗಲಿ ನಮ್ಮ ಸಂವಿಧಾನ ಉಳಿಯುತ್ತದೆ. ನಮ್ಮ ಮೌಲ್ಯಗಳು ಸತ್ತ ದಿನ ನಮ್ಮ ಸಂವಿಧಾನವೂ ಸಾಯುತ್ತದೆ’ ಎಂದು ಹೇಳಿದರು.
ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ‘2047ರ ವೇಳೆಗೆ ವಿಕಸಿತ ಭಾರತ ಆಗಬೇಕಾದರೆ ಪ್ರಗತಿಯ ಫಲ ಪ್ರತಿಯೊಬ್ಬ ಭಾರತೀಯನನ್ನು ತಲುಪಬೇಕು. ಡಿಜಿಟಲ್ ಶಾಸ್ತ್ರದೊಂದಿಗೆ ಕೆಲಸ ಮಾಡಲು ನಾವು ನ್ಯಾಯ ಶಾಸ್ತ್ರ, ಧರ್ಮ ಶಾಸ್ತ್ರ ಮತ್ತು ಅರ್ಥ ಶಾಸ್ತ್ರವನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಕಾನೂನು ನಿಕಾಯದ ಡೀನ್ ಪ್ರೊ. ಬಸವರಾಜ ಕುಬಕಡ್ಡಿ ಸ್ವಾಗತಿಸಿದರು, ಜಯಂತ್ ಬುರುವಾ ಸಮ್ಮೇಳನದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು, ರಾಗಿಣಿ ಕಾರ್ಯಕ್ರಮ ನಿರೂಪಿಸಿದರು. ಅನಂತ ಚಿಂಚುರೆ ವಂದಿಸಿದರು. ಜಯದೇವಿ ಜಂಗಮಶೆಟ್ಟಿ, ರವಿಕಿರಣ ನಾಕೋಡ ಮತ್ತು ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು.
ಪ್ರಭಾರ ಕುಲಸಚಿವ ಪ್ರೊ. ಚನ್ನವೀರ ಆರ್.ಎಂ, ವಿಜ್ಞಾನೇಶ್ವರ ಪ್ರತಿಷ್ಠಾನದ ಟ್ರಸ್ಟಿಗಳಾದ ಅಮಿತ್ಕುಮಾರ್ ದೇಶಪಾಂಡೆ ಮತ್ತು ಮಹಾದೇವಯ್ಯ ಕರದಳ್ಳಿ, ಪ್ರೊ. ವಿಕ್ರಮ ವಿಸಾಜಿ, ವಿಜಯೇಂದ್ರ ಪಾಂಡೆ, ಪಿ.ಎಸ್.ಕಟ್ಟಿಮನಿ, ಪ್ರೊ. ಜಿ.ಆರ್.ಅಂಗಡಿ ಭಾಗವಹಿಸಿದ್ದರು.
ಧರ್ಮ ಕಬ್ಬಿಣ ಅಥವಾ ಪಳೆಯುಳಿಕೆಯಲ್ಲ ಅದು ಯಾವಾಗಲೂ ಸಮಯ ಸ್ಥಳ ಮತ್ತು ಸನ್ನಿವೇಶದೊಂದಿಗೆ ಹೊಂದಿಕೊಳ್ಳುವ ದ್ರವವಿದ್ದಂತೆ–ನ್ಯಾ. ದಿನೇಶ್ ಮಾಹೇಶ್ವರಿ, ರಾಷ್ಟ್ರೀಯ ಕಾನೂನು ಆಯೋಗದ ಅಧ್ಯಕ್ಷರು
ನಮಗೆ ಇತಿಹಾಸ ಅರ್ಥವಾಗದಿದ್ದರೆ ನಾವು ಭಾರತೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಭಾರತೀಯರು ಯಾವಾಗಲೂ ಸರ್ವೇ ಜನ ಸುಖಿನೋ ಭವಂತು ಎಂದು ನಂಬಿದ್ದೇವೆ–ನ್ಯಾ. ಕೃಷ್ಣ ಎಸ್. ದೀಕ್ಷಿತ್, ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.