ADVERTISEMENT

ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ: ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 9:46 IST
Last Updated 13 ನವೆಂಬರ್ 2021, 9:46 IST

ಕಲಬುರಗಿ: ‘ಈ ಬಾರಿಯ ವಿಧಾನ ಪರಿಷತ್‌ (ಸ್ಥಳೀಯ ಸಂಸ್ಥೆ) ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದು ಖಚಿತ. ಹಾಲಿ ಸದಸ್ಯ ಬಿ.ಜಿ. ಪಾಟೀಲ ಅವರ ನಿರ್ಲಕ್ಷ್ಯದ ಧೋರಣೆಯಿಂದಲೇ ಬಿಜೆಪಿಗೆ ಸೋಲಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

‘ಬಿ.ಜಿ. ಪಾಟೀಲ ಅವರು ವಿಧಾನ ಪರಿಷತ್‌ ಸದಸ್ಯರಾಗಿ ಆರು ವರ್ಷ ಪೂರೈಸಿದ್ದಾರೆ. ಒಮ್ಮೆಯೂ ಒಂದು ಹಳ್ಳಿಗೂ ಭೇಟಿ ನೀಡಿಲ್ಲ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತನಾಡಿಲ್ಲ. ಪರಿಷತ್‌ ಸಭೆಯಲ್ಲೂ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಅವರಿಗೆ ನಂಬಿಕೆಯೇ ಇಲ್ಲ. ತಮ್ಮ ಸ್ಥಾನದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸುವವರನ್ನು ಜನ ಏಕೆ ಆಯ್ಕೆ ಮಾಡುತ್ತಾರೆ?’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳು ಸಾಕಷ್ಟಿದ್ದಾರೆ. ಆದರೆ, ನಾವು ಈಗಲೇ ಬಹಿರಂಗ ಮಾಡುವಂತಿಲ್ಲ. ಈ ಬಗ್ಗೆ ನವೆಂಬರ್‌ 14ರಂದು ಬೆಂಗಳೂರಿನಲ್ಲಿ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿ, ಪ್ರಕಟಿಸುತ್ತೇವೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಶರಣಕುಮಾರ ಮೋದಿ, ಡಾ.ಕಿರಣ ದೇಶಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.