
ಆಳಂದ: ‘ಸತ್ಯ ಶುದ್ಧವಾದ ಕಾಯಕವೇ ಶರಣರ ಮೂಲ ತತ್ವವಾಗಿತ್ತು. ಸಮಾಜದ ಪ್ರಗತಿಗೆ ಕಾಯಕವೇ ಆಧಾರವಾಗಿದೆ’ ಎಂದು ಚಲಗೇರಿ ಮಠದ ಪೀಠಾಧಿಪಾತಿ ಶಾಂತವೀರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಾದನಹಿಪ್ಪರಗಿಯ ಸದ್ಗುರು ಶರಣ ಶಿವಲಿಂಗೇಶ್ವರ ಸಾಧು ಮಹಾರಾಜರ 121ನೇ ಪುಣ್ಯಾರಾಧನೆ ಹಾಗೂ ಮಹಾ ರಥೋತ್ಸವದ ನಿಮಿತ್ತ ಮಠದಲ್ಲಿ ಜರುಗಲಿರುವ ಅಧ್ಯಾತ್ಮ ಪ್ರವಚನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
‘ಶರಣರು ಕಾಯಕದಿಂದ ಶಿವನನ್ನು ಒಲಿಸಿಕೊಳ್ಳಲು ನಿಷ್ಠೆಯಿಂದ ಕಾಯಕ ಮಾಡುವುದೇ ಲಿಂಗಪೂಜೆ ಎಂದು ನಂಬಿದ್ದರು. ಪ್ರಸ್ತುತ ಮಾನವ ಸೋಮಾರಿಯಾಗಿ ಪರವಾಲಂಬಿ ಜೀವಿಯಾಗಿ ಬದುಕುತ್ತಿದ್ದಾನೆ. ಶಿವನನ್ನು ಕಾಣಬೇಕಾದರೆ ಶುದ್ದ ಕಾಯಕ, ದಾಸೋಹ ಮಾಡುವ ವ್ಯಕ್ತಿ ದೇವರ ಸ್ವರೂಪವಾಗಿ ಕಾಣುತ್ತಾನೆ’ ಎಂದರು.
ಪ್ರವಚನಕಾರ ಬೆಳಗಲಿಯ ಸಿದ್ದಾರೂಡ ಮಠದ ಸಿದ್ದರಾಮಯ್ಯ ಶಾಸ್ತ್ರೀ ಪ್ರವಚನ ಮಾಡಿದರು. ಸರಸಂಬಾದ ವೀರಸೋಮೇಶ್ವರ ದೇವರು, ಮುಖಂಡರಾದ ಮಲ್ಲಿನಾಥ ಯಳಮೇಲಿ, ಬಸಲಿಂಗಯ್ಯ ಸ್ವಾಮಿ, ಕಲ್ಲಪ್ಪ ಸಿಂಗಶೆಟ್ಟಿ, ರೇವಣಪ್ಪ ಯಳಮೇಲಿ, ರಮೇಶ ಇಕ್ಕಳಕಿ, ಬಸವರಾಜ ಜಳಕೋಟಿ, ಮಲ್ಲಯ್ಯ ಕಣ್ಣಿ ಇದ್ದರು. ಕಲಾವಿದ ಶಾಂತಮಲ್ಲಪ್ಪ ಬಟ್ಟರಕಿ ಸಂಗೀತ ಸೇವೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.