ಕಲಬುರ್ಗಿ: ‘ಅರಿವು ವಿದ್ಯಾಭ್ಯಾಸ ಯೋಜನೆ’ಯಡಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಿಂದ ಸಾಲ ಪಡೆದು ವೃತ್ತಿಪರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಾಲದ ಮೊತ್ತವನ್ನು ಈ ವರ್ಷ ಶೇ 50ರಿಂದ 70ರಷ್ಟು ಕಡಿತಗೊಳಿಸಲಾಗಿದೆ.
ನಿಗಮಕ್ಕ ಪ್ರಸಕ್ತ ಸಾಲಿನಲ್ಲಿ ಕೇವಲ ₹ 50 ಕೋಟಿ ಹಂಚಿಕೆ ಮಾಡಲಾಗಿದ್ದು, ನಿಗಮದ ವಿವಿಧ ಯೋಜನೆಗಳ ಜೊತೆಗೆ ಅರಿವು ವಿದ್ಯಾಭ್ಯಾಸ ಯೋಜನೆಗೂ ಇದೇ ಹಣವನ್ನು ಬಳಸಿಕೊಳ್ಳಬೇಕಿದೆ. ಹೀಗಾಗಿ, ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಮೂಲಕ ಸೀಟು ಪಡೆದು ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ವರ್ಷ ನೀಡಲಾದ ಸಾಲದ ಮೊತ್ತದ ಪೈಕಿ ಪ್ರಸಕ್ತ ವರ್ಷ ಶೇ 50ರಷ್ಟು ನೀಡಲಾಗು ವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದಿದ್ದಾರೆ.
‘ನಿಗಮದಿಂದ ನೀಡಲಾಗುವ ಸಾಲಸೌಲಭ್ಯವನ್ನೇ ನಂಬಿಕೊಂಡು ಅಧ್ಯಯನ ಮುಂದುವರಿಸಿದ್ದೇವೆ. ಈಗ ಏಕಾಏಕಿ ಸಾಲದ ಮೊತ್ತ ಕಡಿತ ಮಾಡುವುದಾಗಿ ಹೇಳುತ್ತಿದ್ದಾರೆ.ಉಳಿದ ಹಣ ಹೊಂದಿಸಲು ಬ್ಯಾಂಕುಗಳಿಂದ, ಖಾಸಗಿಯವರಿಂದ ಸಾಲ ಪಡೆಯ ಬೇಕಿದೆ. ಸಾಲ ಸಿಗದಿದ್ದರೆ ಅಧ್ಯಯನವನ್ನೇ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಎದುರಾಗಲಿದೆ’ ಎಂದು ಹಲವು ವಿದ್ಯಾರ್ಥಿಗಳು ಆತಂಕ ತೋಡಿಕೊಂಡಿದ್ದಾರೆ.
‘ಸರ್ಕಾರದ ಈ ನಿರ್ಧಾರದಿಂದ ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಬಳಿ ನೀಟ್ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ವಿನಿಯೋಗಿಸಲು ₹ 20 ಲಕ್ಷ ಹಣ ಉಳಿದಿದೆ. ಅದನ್ನೇ ಬಳಸಿ ಸಾಲದ ರೂಪ ದಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡಬಹುದು’ ಎನ್ನುತ್ತಾರೆ ಪಾಲಕಜಮೀರ್ ಅಹ್ಮದ್ ಜಾಗೀರದಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.