ಕಲಬುರ್ಗಿ:ಜಲ್ಲಾಧಿಕಾರಿ ಏಕಾಏಕಿ ಲಾಕ್ ಡೌನ್ ಮಾಡಿದ ಆದೇಶ ನಗರದ ಹೋಟೆಲ್, ಚಹಾ ಅಂಗಡಿ, ಖಾನಾವಳಿಗಳ ಮಾಲೀಕರನ್ನು ಗೊಂದಲಕ್ಕೆ ತಳ್ಳಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಇಡ್ಲಿ, ದೋಸೆ, ಪಲಾವ್, ಪೂರಿ, ಸಾಂಬಾರ್ ಮಾಡುವ ತರಕಾರಿ, ಮಾಂಸಾಹಾರದ ಪದಾರ್ಥಗಳು ಮುಂತಾದವುಗಳನ್ನು ರಾತ್ರಿಯೇ ಸಿದ್ಧಪಡಿಸಿ ಇಟ್ಟುಕೊಂಡಿರುತ್ತೇವೆ. ಆದರೆ, ಸೋಮವಾರ ರಾತ್ರಿ 12ರಿಂದ ಲಾಕ್ ಡೌನ್ ಘೋಷಿಸಿದ್ದಾರೆ. ಇದರಿಂದ ಸಿದ್ಧಪಡಿಸಿಕೊಂಡ ತಿಂಡಿಗಳೆಲ್ಲ ವ್ಯರ್ಥವಾಗುತ್ತಿವೆ ಎಂದು ವ್ಯಾಪಾರಿಗಳು ದೂರಿದರು.
ಕನಿಷ್ಠ ಸಂಜೆ ವೇಳೆ ಮಾಹಿತಿ ಖಚಿತಪಡಿಸಿದ್ದರೂ ನಾವು ಹಾನಿಯಿಂದ ತಪ್ಪಿಸಿಕೊಳ್ಳಬಹುದಿತ್ತು. ಲಾಕ್ ಡೌನ್ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೋಮವಾರ ಸಂಜೆಯೇ ಕರೆ ಮಾಡಿದರೂ ಸ್ಪಷ್ಟ ಮಾಹಿತಿ ಯಾರೂ ನೀಡಲಿಲ್ಲ. ಮೂದಲೇ ಕಷ್ಟದಲ್ಲಿರುವ ಹೋಟೆಲ್ ಗಳು ಏಕಾಏಕಿ ಮುಚ್ಚಿದರೆ ನಮ್ಮ ಗತಿ ಏನು?ಎಂದೂ ಮಾಂಸಾಹಾರದ ಹೋಟೆಲ್ ಮಾಲೀಕರೂಬ್ಬರು ಅಳಲು ತೋಡಿಕೊಂಡರು.
'ಹೋಟೆಲುಗಳಿಂದ ಪಾರ್ಸೆಲ್ ನೀಡಲು ಮಾತ್ರ ಅವಕಾಶ ಎಂದು ಜಿಲ್ಲಾಧಿಕಾರಿ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಹಲವು ಕಡೆ ಪಾಲಿಕೆ ಸಿಬ್ಬಂದಿ ಪಾರ್ಸೆಲ್ ನೀಡಲೂ ಅವಕಾಶವಿಲ್ಲ. ಹೋಂ ಡೆಲಿವರಿ (ಮನೆ ಬಾಗಿಲಿಗೆ ತಲುಪಿಸಬೇಕು) ಮಾಡಬಹುದು ಎನ್ನುತ್ತಿದ್ದಾರೆ. ಇದರಿಂದ ಗೊಂದಲ ಮುಂದುವರಿದಿದೆ. ಸಂಕಷ್ಟದಲ್ಲಿರುವ ಹೋಟೆಲ್ ವ್ಯಾಪಾರಿಗಳ ಬಗ್ಗೆ ಕನಿಷ್ಠ ಕಾಳಜಿಯನ್ನಾದರೂ ತೋರಿಸಬೇಕು. ಗೂಂದಲ ಬಗೆಹರಿಸಬೇಕು' ಎಂದು ಸಂಘದ ಕಾರ್ಯದರ್ಶಿ ನರಸಿಂಹ ಮೆಂಡನ್ ಮನವಿ ಮಾಡಿದ್ದಾರೆ.
'ಕಳೆದ ಲಾಕ್ ಡೌನ್ ವೇಳೆ ಕಟ್ಟಡ ಮಾಲೀಕರಲ್ಲಿ ಮನವಿ ಮಾಡಿ ಅಲ್ಪಸ್ವಲ್ಪ ಬಾಡಿಗೆ ರಿಯಾಯಿತಿ ಪಡೆದಿದ್ದೇವು. ಈಗ ಮಧ್ಯದಲ್ಲೇ ಬಂದ್ ಮಾಡಿದ್ದರಿಂದ ಅನಿವಾರ್ಯವಾಗಿ ತಿಂಗಳ ಬಾಡಿಗೆ ಕಟ್ಟಬೇಕಾಗಿದೆ. ಕಾರ್ಮಿಕರಿಗೂ ತಿಂಗಳ ಸಂಬಳ ಕೊಡಬೇಕು. ವಾರಕ್ಕೆ, ತಿಂಗಳಿಗೆ ಬೇಕು ಎಂದು ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಮಸಾಲೆ ಪದಾರ್ಥ ಎಲ್ಲವನ್ನೂ ಖರೀದಿಸಿದ್ದೇವೆ. ಅದರಲ್ಲೂ ನಷ್ಟವಾಗುತ್ತದೆ ಎಂದು ಹೇಳಿದರು.
'ಬೆಂಗಳೂರಿನಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಎರಡು ದಿನ ಮುಂಚಿತ ಮಾಹಿತಿ ನೀಡಿ ಲಾಕ್ ಡೌನ್ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿ ತಡರಾತ್ರಿಯೇ ಏಕಾಏಕಿ ಆದೇಶ ಮಾಡುತ್ತಾರೆ. ಇದರಿಂದ ಆಗುವ ಹಾನಿಯನ್ನು ಅವರು ಗಮನಕ್ಕೆ ತೆಗೆದುಕೊಳ್ಳಬೇಕು' ಎಂದು ಹಣಮಂತ ಮೋಘಾ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.