ಅಫಜಲಪುರ: ಲಾಕ್ಡೌನ್ ಕಾರಣ ತಾಲ್ಲೂಕಿನ ಗ್ರಾಮಗಳಲ್ಲಿ ಮತ್ತು ಪಟ್ಟಣದಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದ್ದರು.
ಬೆಳಿಗ್ಗೆ 6ರಿಂದಲೆ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸರ ತಂಡ ರಸ್ತೆಗಿಳಿದು ಅನಾವಶ್ಯಕ ಸಂಚಾರ ಮಾಡುವ ವಾಹನಗಳ ಮೇಲೆ ಪ್ರಕರಣ ದಾಖಲಿಸಿದರು. ಕಲಬುರ್ಗಿ ರಸ್ತೆ, ವಿಜಯಪುರ ರಸ್ತೆ, ಸೋಲಾಪುರ ರಸ್ತೆ ಮತ್ತು ಘತ್ತರಗಿ ಮಾರ್ಗಗಳನ್ನು ಸಂಪೂರ್ಣ ಬಂದ ಮಾಡಿದ್ದರಿಂದ ಹೆಚ್ಚಿನ ವಾಹನ ಸಂಚಾರ ಕಂಡುಬರಲಿಲ್ಲ.
ಸಿಪಿಐ ಜಗದೇವಪ್ಪ ಮಾತನಾಡಿ, ಜಿಲ್ಲೆಗೆ ವಾಹನಗಳು ಬರದಂತೆ 3 ಕಡೆ ಅಂತರ್ರಾಜ್ಯ ಹಾಗೂ 2 ಕಡೆ ಅಂತರ ಜಿಲ್ಲೆ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.ಸೊನ್ನದಲ್ಲಿ ಮತ್ತು ಘತ್ತರಗಿ ಗ್ರಾಮದ ಹತ್ತಿರ ಮತ್ತು ಮಾಶಾಳ, ಬಳೂರ್ಗಿ, ಅರ್ಜುಣಗಿ ಹತ್ತಿರ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ವಾಹನ ಸಂಚಾರಕ್ಕೆ ಕಡಿವಾಣ: ಬ್ಯಾಂಕ್ ಸಿಬ್ಬಂದಿ, ಅಗತ್ಯ ಸೇವೆ ಒದಗಿಸುವ ಕೆಲವು ಸರ್ಕಾರಿ ಇಲಾಖೆಗಳ ಸಿಬ್ಬಂದಿ ವಾಹನಗಳನ್ನು ಹೊರತು ಪಡೆಸಿ ಪೊಲೀಸರು ಬೇರೆಯವರಿಗೆ ಗಡಿಯೊಳಗೆ ಬಿಡಲಿಲ್ಲ. ಪಿಎಸ್ಐ ವಿಶ್ವನಾಥ ಮುದರೆಡ್ಡಿ ಮಾತನಾಡಿ, ಅನಗತ್ಯವಾಗಿ ಓಡಾಡುತ್ತಿದ್ದವರಿಂದ 28 ವಾಹನಗಳನ್ನು ಜಪ್ತಿ ಮಾಡಲಾಗಿದೆ ಹಾಗೂ ₹ 6700 ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಮಾಶಾಳ, ಕರಜಗಿ, ಮಣೂರ, ಗೊಬ್ಬುರ, ಚವಡಾಪೂರ ಪ್ರಮುಖ ಗ್ರಾಮಗಳಲ್ಲಿಯೂ ಅನಾವಶ್ಯಕ ವಾಹನ ಸಂಚಾರ ತಡೆಯಲಾಗಿತ್ತು. ಆ ಭಾಗದ ರೇವೂರ(ಬಿ) ಮತ್ತು ದೇವಲಗಾಣಗಾಪುರ ಪೊಲೀಸ್ ಠಾಣೆಯವರು ಬಿಗಿಬಂದೋಬಸ್ತ ಏರ್ಪಡಿಸಿದ್ದರು. ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿಸಿದ್ದರು. ತಾಲ್ಲೂಕಿನಲ್ಲಿ ಮೊದಲನೇ ದಿನದ ಲಾಕ್ಡೌನ್ ಯಶಸ್ವಿಯಾಯಿತು.
*ಅಫಜಲಪುರ ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕಾಗಿ ಪಟ್ಟಣದ ಹೊರ ವಲಯದಲ್ಲಿರುವ ಬಿಸಿಎಂ ವಸತಿ ನಿಲಯವನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಲು ಸಿದ್ಧತೆ ನಡೆಸಲಾಗಿದೆ.
–ಯಲ್ಲಪ್ಪ ಸುಬೇದಾರ, ತಹಶೀಲ್ದಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.