ಕಲಬುರಗಿ: ಜಿಲ್ಲೆಯ ಸೇಡಂನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮೇಲೆ ದಾಳಿ ನಡೆಸಿದ ಕಲಬುರಗಿ ಲೋಕಾಯುಕ್ತ ಪೊಲೀಸರು, ₹5 ಸಾವಿರ ಲಂಚ ಪಡೆಯುತ್ತಿದ್ದ ಒಬ್ಬ ಅಧಿಕಾರಿ ಹಾಗೂ ಒಬ್ಬ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಲ್ಲಿಕಾರ್ಜುನ ಹಾಗೂ ಕಂಪ್ಯೂಟರ್ ಆಪರೇಟರ್ ಸಂಗೀತಾ ‘ಲೋಕಾ’ ಬಲೆಗೆ ಬಿದ್ದವರು.
ಕಾಳಗಿ ತಾಲ್ಲೂಕಿನ ಬೆನ್ನೂರ(ಬಿ) ಗ್ರಾಮದ ಬೀರಪ್ಪ ಅವರು ಬೀರಲಿಂಗೇಶ್ವರ ಕೋಳಿ ಸಾಕಾಣಿಕೆದಾರ ಹಾಗೂ ಮಾರಾಟಗಾರರ ಸಹಕಾರ ಸಂಘದ ನೋಂದಣಿಗೆ ಹೋಗಿದ್ದರು. ಆಗ ಅಧಿಕಾರಿಗಳು ಸಹಕಾರ ಸಂಘ ನೋಂದಣಿಗೆ ₹10 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ಬೀರಪ್ಪ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೀತಾ ಬೆನಾಳ, ಇನ್ಸ್ಪೆಕ್ಟರ್ ಅರುಣಕುಮಾರ, ಸಿಬ್ಬಂದಿ ಮಲ್ಲಿನಾಥ ಸೇರಿದಂತೆ ಹಲವರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.