ADVERTISEMENT

ಚಿಂಚೋಳಿ: ವನ್ಯಜೀವಿ, ಜನರಿಗೆ ಕಂಟಕವಾದ ಲಾರಿಗಳು

ವನ್ಯಜೀವಿ ಧಾಮದಲ್ಲಿ ಅತಿಯಾದ ಮಣ್ಣು ಸಾಗಿಸುವ ಲಾರಿಗಳ ಅಬ್ಬರ, ಶಾಸಕರ ಸೂಚನೆಗೂ ಬಗ್ಗದ ಅಧಿಕಾರಿಗಳು

ಜಗನ್ನಾಥ ಡಿ.ಶೇರಿಕಾರ
Published 22 ಜೂನ್ 2021, 5:01 IST
Last Updated 22 ಜೂನ್ 2021, 5:01 IST
ಚಿಂಚೋಳಿ ತಾಲ್ಲೂಕು ಕುಂಚಾವರಂ ವನ್ಯಜೀವಿ ಧಾಮದಲ್ಲಿ ಕೆಂಪು ಮಣ್ಣಿನ ಲಾರಿ ಗುಡ್ಡಕ್ಕೆ ಡಿಕ್ಕಿ ಹೊಡೆದಿರುವುದು
ಚಿಂಚೋಳಿ ತಾಲ್ಲೂಕು ಕುಂಚಾವರಂ ವನ್ಯಜೀವಿ ಧಾಮದಲ್ಲಿ ಕೆಂಪು ಮಣ್ಣಿನ ಲಾರಿ ಗುಡ್ಡಕ್ಕೆ ಡಿಕ್ಕಿ ಹೊಡೆದಿರುವುದು   

ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಕಾಡಿನಲ್ಲಿ ಮಣ್ಣಿನ ಲಾರಿಗಳ ಓಡಾಟದ ಅಬ್ಬರ ಹೆಚ್ಚಾಗಿದೆ. ಅತ್ಯಂತ ಹೆಚ್ಚು ಮಣ್ಣು ಹೇರಿಕೊಂಡು ವೇಗವಾಗಿ ಹೋಗುವ ಲಾರಿಗಳು ಪದೇಪದೇ ಅಪಘಾತಕ್ಕೆ ಒಳಗಾಗುತ್ತಿವೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ಜೀವಕಂಟಕವಾಗಿದೆ.

ಪ್ರತಿ ದಿನ ಲಾರಿಗಳು ಈ ಮಾರ್ಗದಲ್ಲಿ 40ರಿಂದ 50 ಟನ್ ಮಣ್ಣು ತುಂಬಿಕೊಂಡು ಅತ್ಯಂತ ವೇಗವಾಗಿ ಸಂಚರಿಸುತ್ತವೆ. ವನ್ಯಜೀವಿ ಧಾಮದಲ್ಲಿ ಇಂಥ ಸಂಚಾರ ಪ್ರಾಣಿ, ಪಕ್ಷಿಗಳಿಗೂ ಅಪಾಯ ತಂದೊಡ್ಡುತ್ತಿದೆ.

ಈಗಾಗಲೇ ಕೆಲವು ಲಾರಿಗಳ ನಿಯಂತ್ರಣ ತಪ್ಪಿ ತಿರುವುಗಳಲ್ಲಿ ಮರಕ್ಕೆ, ಗುಡ್ಡಕ್ಕೆ ಡಿಕ್ಕಿ ಹೊಡೆಯುವುದು ಕಂದಕಕ್ಕೆ ಬೀಳುವುದು ಮಾಮೂಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

ತೆಲಂಗಾಣದ ಜಮೀನಿನಲ್ಲಿ ಮಣ್ಣಿನ ಗಣಿಗಾರಿಕೆ ನಡೆಸುವ ಖ್ವಾರಿಗಳಿಂದ ಕೆಂಪು ಮಣ್ಣು (ಲ್ಯಾಟ್ರಾಯಿಟ್ ಸಾಯಿಲ್‌) ಲಾರಿಗಳಲ್ಲಿ ತುಂಬಿಕೊಂಡು ರಾಜ್ಯದ ವನ್ಯಜೀವಿ ಧಾಮದ ಮೂಲಕ ತೆಲಂಗಾಣ ಮತ್ತು ಕರ್ನಾಟಕದ ಸಿಮೆಂಟ್ ಕಂಪನಿಗಳಿಗೆ ಈ ಮಣ್ಣು ಪೂರೈಕೆ ಮಾಡಲಾಗುತ್ತಿದೆ.

ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಗಡಿಗಾರಿಕೆಗೆ ಅವಕಾಶವಿಲ್ಲದ ಕಾರಣ ನೆರೆಯ ತೆಲಂಗಾಣದಲ್ಲಿ ಕೆಂಪು ಮಣ್ಣಿನ ಗಣಿಗಾರಿಕೆ ನಡೆಸಿ ಅದನ್ನು ರಾಜ್ಯದ ರಸ್ತೆಯ ಮೂಲಕ ಸಾಗಿಸಲಾಗುತ್ತಿದೆ. ಹೀಗೆ ಸಾಗಿಸುವಾಗ ಅವಘಾತಗಳು ಸಾಮಾನ್ಯವಾಗಿವೆ.

ಅತ್ಯಂತ ಸಂಪದ್ಭರಿತ ಜೀವವೈವಿಧ್ಯ ತಾಣವಾದ ಕುಂಚಾವರಂ ವನ್ಯಜೀವಿ ಧಾಮದಲ್ಲಿ ವನ್ಯಜೀವಿಗಳ ಪ್ರಶಸ್ತ ವಾಸಕ್ಕೆ ಈ ಕೆಂಪು ಮಣ್ಣಿನ ಲಾರಿಗಳ ಓಡಾಟ ಭಂಗ ತರುತ್ತಿದೆ. ಪ್ರಯುಕ್ತ ತೆಲಂಗಾಣದಲ್ಲಿ ಗಣಿಗಾರಿಕೆ ನಡೆಸಿದ್ದು ಅದೇ ರಾಜ್ಯದ ರಸ್ತೆಗಳ ಮೂಲಕ ಸಾಗಿಸುವಂತೆ ಕ್ರಮ ಕೈಗೊಳ್ಳಬೇಕು ಬದಲಾಗಿ ನಮ್ಮ ರಾಯ ರಸ್ತೆ ಮೂಲಕ ಸಂಚರಿಸುವುದರಿAದ ನಮ್ಮ ರಸ್ತೆಗಳು ಹಾಳಾಗುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಕಳೆದ ವರ್ಷ ಇಲ್ಲಿ ಮಣ್ಣಿನ ಲಾರಿಗಳ ಓಡಾಟ ಕುರಿತು ಮಾಹಿತಿ ಪಡೆದಿದ್ದ ಶಾಸಕ ಅವಿನಾಶ ಜಾಧವ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಇವುಗಳ ಓಡಾಟಕ್ಕೆ ತಡೆ ಹಾಕುವುದರ ಜತೆಗೆ, ಅಗತ್ಯಕ್ಕಿಂತ ಹೆಚ್ಚು ಭಾರದ ತುಂಬು ವಾಹನಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.

12 ಅಡಿ ಅಗಲದ ರಸ್ತೆ: ಇಷ್ಟು ಅಗಲದ ರಸ್ತೆ ಇದ್ದರೂ ಎಗ್ಗಿಲ್ಲದೇ ಈ ಲಾರಿಗಳು ಓಡಾಡುತ್ತಿವೆ. ಇದರಿಂದ ಜನರು ಈ ಮಾರ್ಗದಲ್ಲಿ ಸಂಚರಿಸಲು ಹೆದರುತ್ತಿದ್ದಾರೆ. ಒಂದೇ ದಿನ ಎರಡು– ಮೂರು ಲಾರಿಗಳು ಉರುಳಿ ಬೀಳುತ್ತಿರುವುದರಿಂದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ ಎಂದು ಶಾದಿಪುರ ಗ್ರಾಮದ ಮುಖಂಡ ರಾಮಚಂದ್ರ ಪಟೇಲ್ ದೂರಿದ್ದಾರೆ.

ಶಹಾಪುರ ಶಿವರಾಂಪುರ ರಾಜ್ಯ ಹೆದ್ದಾರಿ 149 ವನ್ಯಜೀವಿ ಧಾಮದಲ್ಲಿ ಹಾಯ್ದು ಹೋಗಿದ್ದು ಮಣ್ಣಿನ ಓವರ್ ಲೋಡ್‌ನ ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಆದರೆ, ಇವುಗಳಿಂದ ಕರ್ನಾಟಕ ಸರ್ಕಾರಕ್ಕೆ ರಾಜಸ್ವ ಸಂಗ್ರಹವೂ ಆಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.