ಕಲಬುರ್ಗಿ: ಯಡ್ರಾಮಿ ತಾಲ್ಲೂಕಿನ ಕಡಕೋಳ ಮಡಿವಾಳೇಶ್ವರರ ಜಾತ್ರೆ ಗುರುವಾರ ಅದ್ಧೂರಿಯಾಗಿ ನೆರವೇರಿತು.
ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ತೇರಿನತ್ತ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಇದಕ್ಕೂ ಮುನ್ನ ನಡೆದ ಧರ್ಮ ಸಭೆಯಲ್ಲಿ ಮಾತನಾಡಿದ ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ದೇವರು ಮಾತನಾಡಿ,12ನೇ ಶತಮಾನದಲ್ಲಿ ಹೇಗೆ ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಬಾಳು, ಸಮಪಾಲು ಎಂಬಂತೆ ನಡೆದಿದ್ದರೊ, ಹಾಗೆ ಮಡಿವಾಳೇಶ್ವರರು ತಮ್ಮ ಶಿಷ್ಯ ಪರಂಪರೆಯಲ್ಲಿ ಜಾತಿಭೇದ ಮಾಡದೆ, ಎಲ್ಲರಿಗೂ ಸಮನಾಗಿ ನೋಡಿಕೊಂಡು ಕಡಕೋಳ ಮಠವನ್ನು ಎರಡನೇ ಅನುಭವ ಮಂಟವನ್ನಾಗಿಸಿದ್ದಾರೆ ಎಂದರು.
ಮಡಿವಾಳಪ್ಪನವರ ತತ್ವಪದಗಳನ್ನು ಕೇಳುತ್ತಿದ್ದರೆ, ನಾನು ತಪ್ಪು ಮಾಡದೇ ಮತ್ತು ಧೈರ್ಯದಿಂದ ಬದುಕುತ್ತೇನೆ ಎನ್ನುವ ಛಲ ಹುಟ್ಟುತ್ತದೆ ಎಂದು ಪ್ರತಿಪಾದಿಸಿದರು.
ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮಾತನಾಡಿ, ದೇಶದಲ್ಲಿ ಸಂಸ್ಕೃತಿ ಉಳಿದಿರುವುದು ಇಂತಹ ಮಠ ಮಾನ್ಯಗಳಿಂದ, ಕಡಕೋಳ ಮಡಿವಾಳೇಶ್ವರರಂತಹ ಸಂತರ ಜೀವನದ ಆಧಾರದ ಮೇಲೆ ನಡೆಯುತ್ತಿರುವ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಎಲ್ಲಾ ಮಠಾಧೀಶರೂ ಅಭಿನಂದನಾರ್ಹರು ಎಂದರು..
ಕಡಕೋಳ ಮಡಿವಾಳೇಶ್ವರ ಮಠದ ಡಾ. ರುದ್ರಮುನಿ ಶಿವಾಚಾರ್ಯರು,ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಸ್ಟೇಷನ್ ಬಬಲಾದಿಯ ರೇವಣಸಿದ್ದ ಶಿವಾಚಾರ್ಯರು, ಶಖಾಪೂರ ಮಠದ ಡಾ. ಸಿದ್ದರಾಮ ಶಿವಾಚಾರ್ಯರು,ತೊನಸಳ್ಳಿಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಕಡೇಚೂರದ ಗುರುಮೂರ್ತಿ ಶಿವಾಚಾರ್ಯರು, ಓಂಕಾರಬೇನೂರಿನ ಸಿದ್ದರೇಣುಕ ಶಿವಾಚಾರ್ಯರು, ಚಬನೂರಿನ ರಾಮಲಿಂಗಯ್ಯ ಹಿರೇಮಠ ನೇತೃತ್ವ ವಹಿಸಿದ್ದರು.
ಮಾಜಿ ಶಾಸಕ ದೊಡಪ್ಪಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ತಾ.ಪಂ. ಸದಸ್ಯ ಸಿದ್ದಣ್ಣ ಕವಲ್ದಾರ, ಗ್ರಾ.ಪಂ. ಅಧ್ಯಕ್ಷ ವಿರೇಶ ಹುಡೇದ, ಪ್ರಮುಖರಾದ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ರಾಜಶೇಖರ ಸೀರಿ, ರುದ್ರಗೌಡ ಪೋಲಿಸಪಾಟೀಲ, ರೇವಣಗೌಡ ಮಾಲಿಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.