
ಚಿಂಚೋಳಿ: ತಾಲ್ಲೂಕಿನ ಕುಪನೂರು ಗ್ರಾಮದ ಆರಾಧ್ಯದೇವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಶುಕ್ರವಾರ ನಡೆಯಿತು.
ಮದುವೆ ಮಾದರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಮತ್ತು ನಂದಿಕೋಲು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ರೈತರು ತಮ್ಮ ಹೊಲಗಳಿಂದ ತಂದ ಹಸಿ ಜೋಳದ ಶಿತನಿಯ ತೆನೆಯೇ ಅಕ್ಷತೆಯಾಗಿ ಹಾಕಿ ದೇವರಿಗೆ ಅರ್ಪಿಸಿ ಕೃತಾರ್ಥರಾದರು.
ಗ್ರಾಮದ ಮಧ್ಯದಲ್ಲಿರುವ ಗದ್ದುಗೆಯಿಂದ ಪಲ್ಲಕ್ಕಿ, ನಂದಿಕೋಲು ವಾದ್ಯಮೇಳ ಮತ್ತು ಮಹಿಳೆಯರ ಆರತಿ ಸೇವೆ, ಭಜನೆ ಸೇವೆಯೊಂದಿಗೆ ಮುಖ್ಯಬೀದಿ ಮೂಲಕ ಗ್ರಾಮದ ಹೊರ ವಲಯದಲ್ಲಿರುವ ಮಲ್ಲಿಕಾರ್ಜುನ ದೇವಾಲಯಕ್ಕೆ ಆಗಮಿಸಿತು. ಭಕ್ತರು ಅಕ್ಷತೆ ಹಾಕಿ ಭಕ್ತಿ ಸಮರ್ಪಿಸಿದರು.
ಉದ್ಭವ ಲಿಂಗದ ಐತಿಹ್ಯ ಹೊಂದಿರುವ ಗರ್ಭಗುಡಿಯಲ್ಲಿ ಮಲ್ಲಿಕಾರ್ಜುನನಿಗೆ ವಿಶೇಷ ಸಿಂಗರಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಮಾಡಿದರು. ಹಿಂದೂ ಮುಸ್ಲಿಂ ಭಾವೈಕ್ಯದ ಜಾತ್ರಾ ಮಹೋತ್ಸವ ಎಂಬ ಹೆಗ್ಗಳಿಕೆ ಹೊಂದಿರುವ ಉತ್ಸವದಲ್ಲಿ ಎರಡು ಧರ್ಮಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಉತ್ಸವದಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರು, ಬಸವರಾಜ ಪಾಟೀಲ ಊಡಗಿ, ಶಿವಶರಣರೆಡ್ಡಿ ಪಾಟೀಲ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಸ್ವಾಮಿ, ನರಸಪ್ಪ ಕುಪನೂರ, ಜಗದೇವಯ್ಯ ಸ್ವಾಮಿ ಮಠಪತಿ, ಶೇಖ ಅಹಮ್ಮದ್, ಗಂಗಾಧರ ಗೋಣಿ, ಮಹೇಶ ಪಾಟೀಲ, ಪರಮೇಶ್ವರ ಪಾಟೀಲ, ಸುರೇಶ ವೈದರಾಜ, ಶಿವರಾಜ ಹುಮ್ನಾಬಾದಿ, ಮಲ್ಲಿಕಾರ್ಜುನ ಪೂಜಾರಿ, ಮಲ್ಲಿಕಾರ್ಜುನ ಮಾಳಗೆ, ಸುಭಾಷ ನಿಡಗುಂದಾ, ಮಲ್ಲು ರಾಯಪ್ಪಗೌಡ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.