ಕಲಬುರ್ಗಿ: ಊರಿಗೆ ತಲುಪಿಸುವುದಾಗಿ ಹೇಳಿ ಬೈಕ್ನಲ್ಲಿ ಮಹಿಳೆಯೊಬ್ಬರನ್ನು ಹತ್ತಿಸಿಕೊಂಡು ಬೆದರಿಸಿ ಸುಲಿಗೆ ಮಾಡಿದ ಆರೋಪಿಯನ್ನು ಬಂಧಿಸಿರುವ ಚೌಕ್ ಪೊಲೀಸರು, ಬಂಧಿತನಿಂದ 12 ಗ್ರಾಂ ತಾಳಿಸರ ವಶಪಡಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಯರಗಲ್ ಗ್ರಾಮದ, ಹಾಲಿ ಬ್ರಹ್ಮಪುರ ನಿವಾಸಿ ಸಂತೋಷ ಯಕ್ಕುಂಡಿ ಎಂಬುವವನೇ ಸಿಕ್ಕಿಬಿದ್ದ ಆರೋಪಿ.
ಮಲಘಾಣಗ್ರಾಮದ ಸಂಗೀತಾ ಮಾಳಿಂಗರಾಯ ಬರಗಾಲಿ ಎಂಬುವವರು ಇತ್ತೀಚೆಗೆ ನಗರದ ಕೋಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಮಾತನಾಡಿಸಿದ ಆರೋಪಿ, ಮಲಘಾಣ ಗ್ರಾಮದಲ್ಲಿ ತಮ್ಮ ಪರಿಚಯದವರು ಇದ್ದಾರೆ. ಅಲ್ಲಿಗೆ ಕರೆದೊಯ್ಯುವುದಾಗಿ ಹೇಳಿ ಹಾಗರಗಾ ಕ್ರಾಸ್ ಬಳಿ ಗಾಡಿ ನಿಲ್ಲಿಸಿ ಬೆದರಿಕೆ ಹಾಕಿ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಲಾಕೆಟ್ ಹಾಗೂ 12 ಗ್ರಾಂ ಚಿನ್ನದ ತಾಳಿ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ.
ಈ ಕುರಿತು ಸಂಗೀತಾ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬುಧವಾರ ಸಂಜೆ ಚೌಕ್ ಠಾಣೆ ಪೊಲೀಸರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಸಂತೋಷ ಅನುಮಾನಾಸ್ಪದವಾಗಿ ನಗರದಲ್ಲಿ ಓಡಾಡುವುದು ಕಂಡು ಬಂದಿದೆ. ತಕ್ಷಣ ಆತನನ್ನು ವಶಕ್ಕೆ ಪಡೆದಾಗ ಸುಲಿಗೆ ಮಾಡಿರುವುದು ಗಮನಕ್ಕೆ ಬಂದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.