ADVERTISEMENT

ಕಲಬುರಗಿ | ರೈತ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:24 IST
Last Updated 6 ಜುಲೈ 2025, 6:24 IST
ಸಿದ್ದಣ್ಣ ವೀರಪ್ಪ
ಸಿದ್ದಣ್ಣ ವೀರಪ್ಪ   

ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಶನಿವಾರ ರೈತರೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನ ಮೇಳಕುಂದ (ಬಿ) ಗ್ರಾಮದ ಸಿದ್ದಣ್ಣ ವೀರಪ್ಪ (55) ಮೃತ ರೈತ.

‘ಸಾಲಬಾಧೆಯಿಂದ ವಿಷ ಕುಡಿದಿದ್ದ ಸಿದ್ದಣ್ಣ ಅವರು ಕೆಲವು ದಿನಗಳ ಹಿಂದೆ ಜಿಮ್ಸ್‌ಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡು ಸರಿಯಾಗಿ ಮಾತನಾಡುತ್ತಿದ್ದರು. ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಗ್ಲುಕೋಸ್ ಐ.ವಿ. ಕಳಚಿ ಬಿದ್ದಿದ್ದನ್ನು ಐಸಿಯು ಸಿಬ್ಬಂದಿ ಗಮನಿಸಲಿಲ್ಲ. ಇದರಿಂದ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ’ ಎಂದು ಆರೋಪಿಸಿರುವ ಕುಟುಂಬಸ್ಥರು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮಾನೋಕ್ರೋಟೋಫಾಸ್ ಎಂಬ ವಿಷ ಕುಡಿದಿದ್ದರಿಂದ ಸಿದ್ದಣ್ಣ ಅವರು ಗಂಭೀರ ಸ್ಥಿತಿಯಲ್ಲಿದ್ದರು. ನಾಲ್ಕೈದು ದಿನ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಿದ್ದೇವೆ. ಚಿಕಿತ್ಸೆಗೆ ಸ್ಪಂದಿಸದೆ ಹೃದಯ ಸ್ತಂಭನ (ಕಾರ್ಡಿಯಾಕ್‌ ಅರೆಸ್ಟ್‌) ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ರಕ್ತಸ್ರಾವದಿಂದ ಅಲ್ಲ. ಬ್ಲಾಕ್ ಆಗಿದ್ದ ಗ್ಲುಕೊಸ್ ಐ.ವಿ. ತೆಗೆಯುವಾಗ 10 ಎಂಎಲ್‌ನಷ್ಟು ರಕ್ತ ಕೆಳಗೆ ಬಿದ್ದಿದೆ’ ಎಂದು ಜನರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ.ಜಿ.ಬಿ. ದೊಡ್ಡಮನಿ ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.