ಕಲಬುರ್ಗಿ: ‘ವೀರಶೈವ ಲಿಂಗಾಯತ ಪಾರಿಭಾಷಿಕ ವಿಶ್ವಕೋಶ ರಚನೆಯ ಕಾರ್ಯಕ್ಕೆ ವೇಗ ನೀಡಲು ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯ ಪ್ರಧಾನ ಸಂಪಾದಕ ಡಾ.ಎಂ.ಎಸ್.ಪಾಟೀಲ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಪಾರಿಭಾಷಿಕ ವಿಶ್ವಕೋಶ ರಚನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಶರಣಬಸವಪ್ಪ ಅಪ್ಪ ಅವರ ಆಶಯದಂತೆ ವೀರಶೈವ ಲಿಂಗಾಯತ ಪಾರಿಭಾಷಿಕ ವಿಶ್ವಕೋಶ ರಚನೆಯ ಕಾರ್ಯ ಪ್ರಗತಿಯಲ್ಲಿದೆ. 150 ಶಿವಶರಣ, ಶಿವಶರಣೆಯರಿಂದ 20 ಸಾವಿರದಷ್ಟು ವಚನಗಳು ರಚನೆಯಾಗಿವೆ. ವೀರಶೈವ ಲಿಂಗಾಯತ ಕುರಿತು 95 ಕಾವ್ಯಗಳು ರಚನೆಯಾಗಿವೆ. ಇವುಗಳಲ್ಲಿ ವೀರಶೈವ ಲಿಂಗಾಯತ ಪಾರಿಭಾಷಿಕ ಶಬ್ದಗಳು ಬಳಕೆಯಾಗಿವೆ’ ಎಂದು ತಿಳಿಸಿದರು.
‘ಪ್ರಪಂಚದಲ್ಲಿಯೇ ಆಧ್ಯಾತ್ಮಿಕ ಕ್ರಿಯೆ ಭಾರತದಲ್ಲಿ ಹೆಚ್ಚಿದ್ದು, ಇದಕ್ಕಾಗಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಬಹುಭಾಷಿಕ ದಾರ್ಶನಿಕರು, ಶರಣರು, ಸಂತರು, ಮುನಿಗಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವುಗಳ ಅಧ್ಯಯನ ಎಂದಿಗಿಂತ ಇಂದು ಅಗತ್ಯವಾಗಿದೆ. ಕರ್ನಾಟಕದ ಶರಣರು ಸಮಾಜ, ದೇಶ ಮತ್ತು ಧರ್ಮ ಕಟ್ಟುವ ಕಾರ್ಯವನ್ನು 12ನೇ ಶತಮಾನದಲ್ಲಿಯೇ ಮಾಡಿದ್ದಾರೆ. ಆ ಪರಂಪರೆಯ ವಾರಸುದಾರರಾದ ನಾವು ವೀರಶೈವ ಲಿಂಗಾಯತ ಪಾರಿಭಾಷಿಕ ವಿಶ್ವಕೋಶವನ್ನು ಸಿದ್ಧಪಡಿಸಬೇಕಿದೆ’ ಎಂದು ಹೇಳಿದರು.
ಡಾ.ಎಸ್.ಜಿ.ಡೊಳ್ಳೇಗೌಡರ, ಡಾ.ಎನ್.ಎಸ್.ಪಾಟೀಲ, ಡಾ.ಶಿವರಾಜಶಾಸ್ತ್ರಿ ಹೇರೂರ, ಡಾ.ಸುರೇಶ ನಂದಗಾಂವ, ಡಾ.ವೆಂಕಣ್ಣಗೌಡರ ಮಾತನಾಡಿದರು.
ಡಾ.ಎಂ.ಜಿ.ಪಾಟೀಲ, ಡಾ.ಇಂದಿರಾ ಶೆಟಗಾರ, ಡಾ.ಪುಟ್ಟಮಣಿ ದೇವಿದಾಸ, ಪ್ರೊ.ಸಾವಿತ್ರಿ ಜಂಬಲದಿನ್ನಿ, ರೇವಯ್ಯ ವಸ್ತ್ರದಮಠ, ಪ್ರೊ.ಗೀತಾ ಹರವಾಳ, ಪ್ರೊ.ಜಗದೇವಿ, ಪ್ರೊ.ನಾನಾಸಾಹೇಬ ಹಚ್ಚಡದ, ಡಾ.ಚಿದಾನಂದ ಚಿಕ್ಕಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.