ಕಾಳಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕುಡ್ಡಳ್ಳಿ ಗ್ರಾಮದಲ್ಲಿ ಶುಕ್ರವಾರ (ಆ.5) ತಡರಾತ್ರಿ ವ್ಯಕ್ತಿಯೊಬ್ಬನ ಕೊಲೆಯಾಗಿದ್ದು ಘಟನೆಗೆ ಸಂಬಂಧಿಸಿ ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಕುಡ್ಡಳ್ಳಿ ಗ್ರಾಮದ ರಾಮಣ್ಣ ಚಂದ್ರಪ್ಪ ಗೋಟೂರು (35) ಕೊಲೆಯಾದ ವ್ಯಕ್ತಿ. ವ್ಯಕ್ತಿಯ ಪತ್ನಿ ಸುನೀತಾ ರಾಮಣ್ಣ ಗೋಟೂರ (28) ಅದೇ ಗ್ರಾಮದ ಮಲ್ಲಪ್ಪ ಮೊಗಲಪ್ಪ ಪೂಜಾರಿ ಎಂಬುವವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದು ಪತಿಗೆ ಗೊತ್ತಾಗಿತ್ತು ಎನ್ನಲಾಗಿದೆ.
ಆದ್ದರಿಂದ ಸುನೀತಾ ಪ್ರಿಯಕರ ಮಲ್ಲಪ್ಪ ಮೊಗಲಪ್ಪ ಪೂಜಾರಿ, ಆತನ ಸಹಚರರಾದ ಸಾಬಣ್ಣಾ ನಾಗಪ್ಪ ಪೂಜಾರಿ, ಬಸಪ್ಪ ಭೀಮರಾವ ಗೋಟೂರ ಎಂಬುವರನ್ನು ರಾತ್ರಿ ಮನೆಗೆ ಕರೆಸಿಕೊಂಡು ಎಲ್ಲರೂ ಕೂಡಿ ರಾಮಣ್ಣನ ಕೈಕಾಲು ಕಟ್ಟಿಹಾಕಿ, ಬೆಂಕಿಯಲ್ಲಿ ಕಾಯಿಸಿದ ಕಡಚಿಗೆಯನ್ನು ಬಾಯಿಗೆ ಚುಚ್ಚಿ, ಬಟ್ಟೆ ತುರುಕಿ, ಗುಪ್ತಾಂಗ ತಿರುವಿ, ಮನಬಂದಂತೆ ಹೊಡೆದು ಕೊಲೆ ಮಾಡಿದ್ದಾರೆ.
ಅದಲ್ಲದೇ ಮೃತದೇಹವನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಬೈಕ್ನಲ್ಲಿ ಚಿಂಚೋಳಿ ಕಡೆಗೆ ತೆರಳುತ್ತಿದ್ದಾಗ ಸ್ಥಳೀಯರು ನೋಡಿದ್ದಾರೆ. ಜನ ನೋಡುತ್ತಿದ್ದಂತೆ ಆರೋಪಿಗಳು ಊರ ಸಮೀಪದಲ್ಲೆ ಮೃತದೇಹವನ್ನು ರಸ್ತೆ ಬದಿಯಲ್ಲೆ ಬಿಸಾಕಿ ಓಡಿಹೋಗಿದ್ದಾರೆ.
ಮನೆಯಲ್ಲಿ ಈ ಘಟನೆ ಗಮನಿಸಿದ ಮೃತನ ಇಬ್ಬರು ಮಕ್ಕಳು ಊರಮಂದಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಚಿಂಚೋಳಿ ಡಿವೈಎಸ್ಪಿ ಕೆ.ಬಸವರಾಜ, ಸುಲೇಪೇಟ ಸಿಪಿಐ ಕೆ.ಜೆ.ಜಗದೀಶ, ಪಿಎಸ್ಐ ಸುಖಾನಂದ ಅವರು ಮೃತನ ಪತ್ನಿ ಸಹಿತ ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.
ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಮೃತನ ಅಂತ್ಯಕ್ರಿಯೆ ನೆರವೇರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.