ಕಲಬುರಗಿ: ಜಗತ್ ಸರ್ಕಲ್, ಸಂತ್ರಾಸವಾಡಿ, ದರ್ಗಾ ಭಾಗದಿಂದ ಖರ್ಗೆ ಪೆಟ್ರೋಲ್ ಪಂಪ್ ಹಾಗೂ ಹಾಗರಗಾ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮಹಾತ್ಮ ಗಾಂಧಿ ರಸ್ತೆಯ ಮಧ್ಯದಲ್ಲಿ 150ಕ್ಕೂ ಅಧಿಕ ಬೃಹತ್ ತಗ್ಗುಗಳು ತಲೆ ಎತ್ತಿ ನಿಂತಿದ್ದು, ವಾಹನ ಸವಾರರು ನಿತ್ಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ರಸ್ತೆಯಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಸರ್ಕಾರಿ ಉಪಕರಣಾಗಾರ, ಕೆಜಿಬಿ ಬ್ಯಾಂಕ್, ಕೆನರಾ ಬ್ಯಾಂಕ್, ಮೋರ್ ಮಳಿಗೆ, ಸಣ್ಣಪುಟ್ಟ ಹೋಟೆಲ್ಗಳು, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ಪ್ರಮುಖ ಸಂಸ್ಥೆಗಳ ಕಚೇರಿಗಳಿವೆ. ಸಂತ್ರಾಸವಾಡಿ ಭಾಗದವರಿಗೆ ರಿಂಗ್ ರಸ್ತೆ ತಲುಪಲು ಇರುವ ಏಕೈಕ ದಾರಿ ಎಂ.ಜಿ. ರಸ್ತೆಯೇ ಆಗಿದೆ. ಜೊತೆಗೆ, ಆದರ್ಶ ನಗರ, ಗುಬ್ಬಿ ಕಾಲೊನಿಯ ಜನರೂ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ನಗರದ ಪ್ರತಿಷ್ಠಿತ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಶಾಲಾ ವಾಹನಗಳು ಇದೇ ರಸ್ತೆಯನ್ನೇ ಅವಲಂಬಿಸಿವೆ. ಇಷ್ಟಾಗಿಯೂ ಪಾಲಿಕೆ ಸದಸ್ಯರು, ಅಧಿಕಾರಿಗಳಿಗೆ ಈ ರಸ್ತೆಯನ್ನು ಸುಸಜ್ಜಿತ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಯೋಚನೆಯೇ ಹೊಳೆದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಿತ್ಯ ಇದೇ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಆಟೊ ಚಾಲಕರು.
ಕೆಬಿಎನ್ ದರ್ಗಾ ರಸ್ತೆಯಿಂದ ಬಲಕ್ಕೆ ಹೊರಳಿದರೆ ಎಂ.ಜಿ. ರಸ್ತೆ ಎದುರಾಗುತ್ತದೆ. ರಸ್ತೆ ಆರಂಭವಾಗುತ್ತಿದ್ದಂತೆಯೇ ಎರಡು ಬೃಹತ್ ತಗ್ಗುಗಳು ಕಾಣಿಸಿಕೊಳ್ಳುತ್ತವೆ. ಮುಂದೆ ಹೋದಂತೆಲ್ಲ ತಗ್ಗುಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಇದೀಗ ಮಳೆಗಾಲ ಆರಂಭವಾಗಿದ್ದರಂದ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ನಿಧಾನವಾಗಿ ಸಾಗುತ್ತಿದ್ದರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಗುಂಡಿಗಳನ್ನೂ ಲೆಕ್ಕಿಸದೇ ವೇಗವಾಗಿ ಹೋದರೆ ಆಯತಪ್ಪಿ ಬೀಳುವುದು ಖಾತ್ರಿ ಎಂಬಂತಾಗಿದೆ. ಅಲ್ಲಲ್ಲಿ ರೋಡ್ ಬ್ರೇಕ್ಗಳನ್ನು ಹಾಕಲಾಗಿದ್ದು, ರೋಡ್ ಬ್ರೇಕ್ಗೆ ಹೊಂದಿಕೊಂಡೇ ದೊಡ್ಡ ತಗ್ಗುಗಳು ಬಿದ್ದಿವೆ. ಹೀಗಾಗಿ, ಸಣ್ಣ ಚಕ್ರದ ಸ್ಕೂಟರ್ಗಳನ್ನು ಚಲಾಯಿಸುವುದು ಅಪಾಯಕಾರಿ ಎಂಬಂತಾಗಿದೆ. ಜೊತೆಗೆ, ವಾಹನಗಳು ಕೆಟ್ಟು ಹೋಗುತ್ತಿದ್ದು, ದುರಸ್ತಿಗೆಂದೇ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ.
ಮಹಾತ್ಮ ಗಾಂಧಿ ರಸ್ತೆಯ ಜೊತೆಗೆ ರಸ್ತೆಯ ವೃತ್ತವೊಂದಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನೂ ಇರಿಸಲಾಗಿದೆ. ರಾಷ್ಟ್ರಪಿತ ಹಾಗೂ ಮಾಜಿ ಪ್ರಧಾನಿಯಂತಹ ಗಣ್ಯರ ಹೆಸರು ಹೊಂದಿದ ರಸ್ತೆ ಹಾಗೂ ವೃತ್ತವನ್ನು ಇಷ್ಟೊಂದು ಕಳಪೆಯಾಗಿ ನಿರ್ವಹಿಸಿದ್ದು ನೋಡಿದರೆ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇರುವ ಕಾಳಜಿ ಎಂಥದು ಎಂಬುದು ತಿಳಿಯುತ್ತದೆ ಎಂದು ಆಟೊ ಚಾಲಕರೊಬ್ಬರು ವ್ಯಂಗ್ಯವಾಡುತ್ತಾರೆ.
‘ನಿತ್ಯ ಇದೇ ದಾರಿಯಲ್ಲಿ ಬೈಕ್ನಲ್ಲಿ ಸಂಚರಿಸುತ್ತೇನೆ. ಎಂ.ಜಿ. ರಸ್ತೆ ಬರುತ್ತಿದ್ದಂತೆಯೇ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು ಎನಿಸುತ್ತದೆ. ಕೆಲ ವರ್ಷಗಳಿಂದ ತೀರಾ ದೊಡ್ಡ ತಗ್ಗುಗಳು ಬಿದ್ದಾಗ ಒಂದಷ್ಟು ಮರಂ ಅಥವಾ ಗರಸು ಹಾಕಿ ತೇಪೆ ಹಾಕುತ್ತಾರೆ. ಆದರೆ, ಶಾಶ್ವತ ಪರಿಹಾರ ಇನ್ನೂ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಗರದ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸಂಗನಗೌಡ ಹಿರೇಗೌಡ.
ರಸ್ತೆಗಳ ಅಭಿವೃದ್ಧಿಗೆ ₹ 25 ಕೋಟಿ’
ಕಲಬುರಗಿ ಮಹಾನಗರ ಪಾಲಿಕೆಯ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ₹ 25 ಕೋಟಿ ಮೀಸಲಿಡಲಾಗಿದ್ದು ಹಲವು ರಸ್ತೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ಅದರಲ್ಲಿ ಎಂ.ಜಿ. ರಸ್ತೆಯೂ ಸೇರಿದೆ ಎನ್ನುತ್ತಾರೆ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ. ‘ಉತ್ತರ ಮತಕ್ಷೇತ್ರದ ಪ್ರಮುಖ ರಸ್ತೆಗಳನ್ನು ಈ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಲ್ಲಿಯವರೆಗೆ ತಗ್ಗು ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆಗಳನ್ನಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.