ADVERTISEMENT

ಸಿ.ಎಂ, ಸಚಿವರಿಂದ ₹ 5.88 ಕೋಟಿ ಪ್ರವಾಸ ಭತ್ಯೆ

ಕೋಟಾ ಶ್ರೀನಿವಾಸ ಪೂಜಾರಿ ಅತಿ ಹೆಚ್ಚು ಭತ್ಯೆ ಪಡೆದ ಸಚಿವ; ಭತ್ಯೆಯನ್ನೇ ಪಡೆದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 14:21 IST
Last Updated 27 ಜೂನ್ 2022, 14:21 IST
ಭೀಮನಗೌಡ ಪರಗೊಂಡ
ಭೀಮನಗೌಡ ಪರಗೊಂಡ   

ಕಲಬುರಗಿ: 2020ರ ಜುಲೈನಿಂದ 2022ರ ಜನವರಿವರೆಗೆ ರಾಜ್ಯ ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸದಸ್ಯರು ₹ 5.88 ಕೋಟಿ ಪ್ರವಾಸ ಭತ್ಯೆ ಪಡೆದಿರುವ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಹೊರಬಿದ್ದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹ 9.38 ಲಕ್ಷ ಭತ್ಯೆ ಪಡೆದಿದ್ದಾರೆ, ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಗೃಹಸಚಿವರಾಗಿದ್ದ ಸಂದರ್ಭದಲ್ಲಿ ಬೊಮ್ಮಾಯಿ ಅವರು (ಜುಲೈ 2020 ರಿಂದ ಆಗಸ್ಟ್ 2021) ₹ 8.12 ಲಕ್ಷ ಪ್ರವಾಸ ಭತ್ಯೆ ಪಡೆದಿದ್ದಾರೆ.

ಆದರೆ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ಪ್ರವಾಸ ಭತ್ಯೆ ಪಡೆದಿಲ್ಲ.

ADVERTISEMENT

ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಭೀಮನಗೌಡ ಪರಗೊಂಡ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ಬಿಡುಗಡೆ ಮಾಡಿದರು.

ಅತಿ ಹೆಚ್ಚು ₹ 43.20 ಲಕ್ಷ ಪ್ರಯಾಣ ಭತ್ಯೆಯನ್ನು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪಡೆದಿದ್ದಾರೆ.
ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ₹ 20.21 ಲಕ್ಷ, ಮೀನುಗಾರಿಕೆ ಸಚಿವ ಎಸ್. ಅಂಗಾರ ₹ 5.49 ಲಕ್ಷ, ಕೃಷಿ ಸಚಿವ ಬಿ.ಸಿ. ಪಾಟೀಲ ₹ 30.28 ಲಕ್ಷ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ₹ 31.83 ಲಕ್ಷ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಸಿ.ಟಿ. ರವಿ ₹ 5.07 ಲಕ್ಷ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ₹ 8.41 ಲಕ್ಷ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ₹ 14.08 ಲಕ್ಷ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ₹ 32.96 ಲಕ್ಷ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ₹ 39.08 ಲಕ್ಷ, ಅಬಕಾರಿ ಸಚಿವರಾಗಿದ್ದ ಎಚ್. ನಾಗೇಶ್ ₹ 7.18 ಲಕ್ಷ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ₹ 43.20 ಲಕ್ಷ, ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ₹ 19.40 ಲಕ್ಷ, ಸಣ್ಣ ನೀರಾವರಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ₹ 14.17 ಲಕ್ಷ ಪ್ರವಾಸ ಭತ್ಯೆ ಪಡೆದಿದ್ದಾರೆ.

ಯುವ ಸಬಲೀಕರಣ ಸಚಿವ ನಾರಾಯಣಗೌಡ ₹ 21.62 ಲಕ್ಷ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ₹ 7.52 ಲಕ್ಷ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ₹ 31.91 ಲಕ್ಷ, ಕಂದಾಯ ಸಚಿವ ಆರ್. ಅಶೋಕ ₹ 4.44 ಲಕ್ಷ, ತೋಟಗಾರಿಕೆ ಇಲಾಖೆ ಮಾಜಿ ಸಚಿವ ಆರ್. ಶಂಕರ್ ₹ 11.83 ಲಕ್ಷ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ₹ 14.39 ಲಕ್ಷ, ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ₹ 17.95 ಲಕ್ಷ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ₹ 27.33 ಲಕ್ಷ, ವಸತಿ ಸಚಿವ ವಿ. ಸೋಮಣ್ಣ ₹ 11.85 ಲಕ್ಷ, ಕೈಮಗ್ಗ ಮತ್ತು ಜವಳಿ ಸಚಿವರಾಗಿದ್ದ ಶ್ರೀಮಂತ ಪಾಟೀಲ ₹ 5.92 ಲಕ್ಷ, ಸಾರಿಗೆ ಸಚಿವ ಬಿ. ಶ್ರೀರಾಮುಲು ₹ 31.27 ಲಕ್ಷ, ಅರಣ್ಯ ಮತ್ತು ಆಹಾರ, ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ₹ 38.42 ಲಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ ₹ 12.13 ಲಕ್ಷ, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ₹ 5.64 ಲಕ್ಷ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ₹ 7.88 ಲಕ್ಷ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್ ₹ 21.16 ಲಕ್ಷ ಪ್ರವಾಸ ಭತ್ಯೆ ಪಡೆದಿದ್ದಾರೆ.

ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಹಣ ಪಡೆದರೂ ಕೆಲವು ಸಚಿವರು ಇನ್ನೂ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಹೀಗಾದರೆ, ಅವರ ಇಲಾಖೆಗಳಲ್ಲಿ ಜನರ ಕೆಲಸ ಆಗುವುದಾದರೂ ಹೇಗೆ ಎಂದು ಭೀಮನಗೌಡ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.